ಶಿವಮೊಗ್ಗ | ನರಸಿಂಹ ಹತ್ಯೆ ಪ್ರಕರಣ ; ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

ಕ್ರೈಂ

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದ ನರಸಿಂಹ ಯಾನೆ ದಾಸ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಧು ಯಾನೆ ಹನುಮಂತು ಪೊಲೀಸ್ ವಶದಿಂದ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿರುವ ಘಟನೆ ಹೊಳೆಬೆನವಳ್ಳಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಪ್ರಕರಣಕ್ಕೆ ಸಂಬಂಧಿಸಿದ ಮಹಜರ್ ನಡೆಸಲು ಆರೋಪಿಯನ್ನು ಹೊಳೆಬೆನವಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮೂತ್ರ ವಿಸರ್ಜನೆಗೆ ಅವಕಾಶ ನೀಡುವಂತೆ ಮಧು ಮನವಿ ಮಾಡಿದ್ದಾನೆ. ಪೊಲೀಸರು ಅವಕಾಶ ನೀಡಿದಾಗ, ಕೈಗೆ ಹಾಕಿದ್ದ ಬೇಡಿಯನ್ನು ಬಳಸಿಕೊಂಡು ಕೋಟೆ ಪೊಲೀಸ್ ಠಾಣೆಯ ಪಿಸಿ ಅಂಜನಪ್ಪ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೀಡಿದರೂ ಮಧು ಓಡಿಹೋಗಲು ಮುಂದಾಗಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ತನಿಖಾಧಿಕಾರಿ ಹರೀಶ್ ಪಟೇಲ್ ಅವರು ಆತ್ಮರಕ್ಷಣೆ ಹಾಗೂ ಆರೋಪಿಯನ್ನು ಬಂಧಿಸುವ ಉದ್ದೇಶದಿಂದ ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಗೊಂಡ ಆರೋಪಿಯನ್ನು ಮತ್ತೆ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ನರಸಿಂಹ ಯಾನೆ ದಾಸ ಹತ್ಯೆ ಪ್ರಕರಣದ ಸಂಪೂರ್ಣ ಸಂಚು ರೂಪಿಸಿದ್ದ ವ್ಯಕ್ತಿ ಮಧುವಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ಎಂದು ತಿಳಿಸಿದ್ದಾರೆ. ಮಹಜರ್ ವೇಳೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಕಾನೂನುಬದ್ಧ ಕ್ರಮವಾಗಿ ಗುಂಡು ಹಾರಿಸಲಾಗಿದೆ ಎಂದರು.

ಪ್ರಕರಣದಲ್ಲಿ ಅಂಬು ಯಾನೆ ಅನಿಲ್, ಮಧು ಯಾನೆ ಹನುಮಂತು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಸೇರಿದಂತೆ ಐವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹೊಳೆಬೆನವಳ್ಳಿಯ ಸುಬ್ಬಯ್ಯ ಆಸ್ಪತ್ರೆ ಹಿಂಭಾಗದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪಿಸಿ ಅಂಜನಪ್ಪನವರನ್ನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.

ಹಳೆಯ ದ್ವೇಷದ ಹಿನ್ನಲೆಯಲ್ಲಿ ನರಸಿಂಹನ ಹತ್ಯೆಯಾಗಿದೆ ಎಂದಿದ್ದಾರೆ.ವಿಡಿಯೋ ವೈರಲ್ ಮತ್ತು ಇಸ್ಪೀಟ್ ಅಡ್ಡಯಲ್ಲೇ ದಾಸನ ಹತ್ತೆಯ ಬಗ್ಗೆನೂ ಪ್ರತಿಕ್ರಿಯಿಸಿರುವ ಎಸ್ಪಿ ನಿಖಿಲ್ ವಿಡಿಯೋ ಬಗ್ಗೆನೂ ಕ್ರಮ ಜರುಗಿಸಲಾಗುವುದು. ಈ ಹಿಂದೆ ನಾಲ್ಕುಬಾರಿ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಲಾಗಿತ್ತು. ಮತ್ತೆ ಆರಂಭದ ಬಗ್ಗೆ ಗಮನಹರಿಸಲಾಗುವುದು ಎಂದರು.

Author