ಶಿವಮೊಗ್ಗ, ಬುರ್ಖಾ ಧರಿಸಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ ಘಟನೆ, ಜೂನ್ 10 ರ ಸಂಜೆ ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆಯಲ್ಲಿ ನಡೆದಿದೆ. ಶಿವಮೊಗ್ಗದ ಸೆಂಟ್ರಲ್ ಜೈಲ್ ನಲ್ಲಿರುವ ವಿಚಾರಣಾಧೀನ ಕೈದಿಯೋರ್ವನೆ ಪ್ರಕರಣದ ಸೂತ್ರಧಾರನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿರುವ ತನ್ನನ್ನು ನೋಡಲು ಪತ್ನಿ ಬರುತ್ತಿಲ್ಲ. ಖರ್ಚಿಗೆ ಹಣ ನೀಡುತ್ತಿಲ್ಲವೆಂದು ಅಸಮಾಧಾನಗೊಂಡಿದ್ದ.ಈ ಹಿನ್ನೆಲೆಯಲ್ಲಿ ಕೆ ಆರ್ ಪುರಂ ರಸ್ತೆಯಲ್ಲಿ ವಾಸವಾಗಿರುವ ತನ್ನ ಪತ್ನಿಗೆ ಬೆದರಿಸಲು, ತನಗೆ ಪರಿಚಯವಿದ್ದ ನಾಲ್ವರು ಯುವಕರನ್ನು ಕಳುಹಿಸಿದ್ದ ಎಂಬ ಮಾಹಿತಿ. ಆರೋಪಿಗಳು ಬುರ್ಖಾ ಧರಿಸಿಕೊಂಡು, ಮಹಿಳೆಯ ಮನೆ ಬಳಿ ತೆರಳಿದ್ದರು.
ಈ ವೇಳೆ ಇವರ ಚಲನವಲನದ ಬಗ್ಗೆ ಸುತ್ತಮುತ್ತಲಿನ ನಾಗರಿಕರು ಅನುಮಾನಗೊಂಡಿದ್ದಾರೆ. ಬುರ್ಖಧಾರಿಗಳನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ಅವರು ಮಹಿಳೆಯರಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.ಇದರಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು, ಆರೋಪಿಗಳಿಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಓರ್ವ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.ಪೊಲೀಸರ ವಿಚಾರಣೆ ವೇಳೆ, ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೋರ್ವನ ಅಣತಿಯಂತೆ ಆತನ ಪತ್ನಿಗೆ ಬೆದರಿಕೆ ಹಾಕಲು ಬಂದಿರುವ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.


