ಶಿವಮೊಗ್ಗ,ಬಿ. ಕೆ. ಸಂಗಮೇಶ್ವರ್ಗೆ ಮಂತ್ರಿ ಸ್ಥಾನ ನೀಡಿ ಎಂದು ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಘಟಕಗಳ ಸಮಿತಿ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಿ. ವಿಜಯಕುಮಾರ್, ಬಿ. ಕೆ. ಸಂಗಮೇಶ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಅಪಾರ ಜನಮನ್ನಣೆಗಳಿಸಿದ್ದಾರೆ. ಪ್ರಮುಖವಾಗಿ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯದ ನಾಯಕತ್ವ ಹೊಂದಿದ್ದಾರೆ.
ಭದ್ರಾವತಿ ಸೇರಿದಂತೆ ಮಲೆನಾಡಿನಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಸಂಗಮೇಶ್ರವರ ನಾಯಕತ್ವ ಬೇಕೇ ಬೇಕಾಗಿದೆ ಎಂದರು. ಮಂತ್ರಿಮಂಡಲದಲ್ಲಿ ಅವರಿಗೆ ಸ್ಥಾನ ನೀಡಲೇಬೇಕು.
ಡಿ.ಕೆ.ಶಿವಕುಮಾರ್ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರ ಅಧಿಕಾರಾವದಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಬಲಿಷ್ಠವಾಗುತ್ತದೆ ಎಂಬ ನಂಬಿಕೆ ನಮಗಿದೆ. ನಿರ್ಲಕ್ಷಿಸಲ್ಪಟ್ಟಿರುವ ಭದ್ರಾವತಿ ಭಾಗಕ್ಕೂ ಆದ್ಯತೆ ಕೊಡುವ ಹಿನ್ನಲೆಯಲ್ಲಿ ಸಂಗಮೇಶ್ರವರಿಗೆ, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರವರಿಷ್ಠರು, ಸಚಿವ ಸ್ಥಾನವನ್ನು ನೀಡಬೇಕು ಎಂದರು.
ಕಾಂಗ್ರೆಸ್ ಜಿಲ್ಲೆಯಲ್ಲಿ ಮತ್ತೆ ಭದ್ರಕೋಟೆಯಾಗಬೇಕು. ಇದಕ್ಕಾಗಿ ಸಂಗಮೇಶ್ರವರ ನಾಯಕತ್ವ ಬೇಕಾಗಿದೆ. ಪಕ್ಷದ ಹಿತದೃಷ್ಟಿಯಿಂದಲೂ ಅವರು ಸಚಿವರಾಗಬೇಕು. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. 2028ಕ್ಕೆ ವಿಧಾನಸಭಾ ಚುನಾವಣೆಯೂ ಬರಲಿದೆ. ಈ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಸಂಗಮೇಶ್ ಹೊಂದಿದ್ದಾರೆ. ಹಾಗಾಗಿ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಲೇಬೇಕು ಎಂಬೊತ್ತಾಯ ಮಾಡಿದರು.


