ಶಿವಮೊಗ್ಗ | ಕಾಂಗ್ರೆಸ್ ಸಾಧನಾ ಸಮಾವೇಶ ಬಗ್ಗೆ ಸಂಸದರು ಹೇಳಿದ್ದಿಷ್ಟು..!

ರಾಜಕೀಯ

ಶಿವಮೊಗ್ಗ,ಕಾಂಗ್ರೆಸ್ ಸರ್ಕಾರವು ಇಂದು ತುಮಕೂರಿನಲ್ಲಿ ತನ್ನ 3ನೇ ವರ್ಷದ ‘ಪ್ರಗತಿಯತ್ತ ಕರ್ನಾಟಕ’ ಸಮಾವೇಶ ನಡೆಸುತ್ತಿರುವ ಬೆನ್ನಲ್ಲೇ, ಇಂದು ಶಿಕಾರಿಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಸರಣಿ ವೈಫಲ್ಯಗಳು, ಭ್ರಷ್ಟಾಚಾರ ಹಾಗೂ ಸಮಾಜ ವಿರೋಧಿ ಧೋರಣೆಗಳನ್ನು ಅಂಕಿ-ಅಂಶಗಳ ಸಮೇತ ತೆರದಿಟ್ಟರು.

ಮುಂದುವರೆದು ಮಾತನಾಡಿದ ಅವರು ರಾಜ್ಯದ ಜನತೆ ಇಂದು ಕೇಳುತ್ತಿದ್ದಾರೆ—”ಪ್ರಗತಿ ಎತ್ತ ಕರ್ನಾಟಕ? ಎಲ್ಲಿದೆ ಪ್ರಗತಿ?” ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ರೈತರು ಸುಖವಾಗಿಲ್ಲ, ಪ್ರಗತಿ ಕಂಡಿಲ್ಲ, ಮಹಿಳೆಯರಿಗೆ ಸುರಕ್ಷತೆಯಿಲ್ಲ, ಯುವಶಕ್ತಿ ಬೀದಿಗಿಳಿದು ಹೋರಾಡುತ್ತಿದೆ. ಇದು ಪ್ರಗತಿಯ ಪ್ರದರ್ಶನವಲ್ಲ, ಬದಲಿಗೆ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವ ಹಾಗೂ ಉಪಮುಖ್ಯಮಂತ್ರಿಗಳು ಕುರ್ಚಿ ಕಿತ್ತುಕೊಳ್ಳುವ ‘ಕುರ್ಚಿ ಕಾದಾಟದ ಉತ್ಸವ’ ಅಷ್ಟೇ! ಎಂದು ಕುಟುಕಿದರು.

ಮುಂದುವರೆದು ಆರೋಪಿಸುತ್ತ…

ಗ್ಯಾರಂಟಿ ಹೆಸರಲ್ಲಿ ಖಜಾನೆ ಖಾಲಿ – ಕುಂಠಿತ ಅಭಿವೃದ್ಧಿ:

ಶಕ್ತಿ ಯೋಜನೆ: ಮಹಿಳೆಯರಿಗೆ ಉಚಿತ ಪ್ರಯಾಣ ಎಂದರು, ಆದರೆ ಹೊಸ ಬಸ್‌ಗಳಿಲ್ಲ. ಸಾರಿಗೆ ಸಂಸ್ಥೆಗಳಿಗೆ ನೀಡಬೇಕಾದ ₹4,000 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡು ಸಂಸ್ಥೆಗಳನ್ನು ದಿವಾಳಿಯ ಅಂಚಿಗೆ ತಳ್ಳಿದ್ದಾರೆ.

ರಸ್ತೆ ರಿಪೇರಿಗೂ ಹಣವಿಲ್ಲ!

ಗೃಹಲಕ್ಷ್ಮಿ: 2024-25ರ ಸಾಲಿನಲ್ಲಿ 12 ಕಂತುಗಳ ಬದಲಿಗೆ ಕೇವಲ 10 ಕಂತುಗಳನ್ನು ಮಾತ್ರ ನೀಡಲಾಗಿದೆ. ಸುಮಾರು ₹5,000 ಕೋಟಿ ಹಣ ಎಲ್ಲಿ ಹೋಯಿತು?•

ಗೃಹಜ್ಯೋತಿ: ವಿದ್ಯುತ್ ಬಿಲ್ ದುಪ್ಪಟ್ಟು ಮಾಡಿ ರಾಜ್ಯದ ಉದ್ಯಮಗಳು ನೆರೆರಾಜ್ಯಗಳಿಗೆ ಪಲಾಯನ ಮಾಡುವಂತೆ ಮಾಡಿದ್ದಾರೆ.•

ಅನ್ನಭಾಗ್ಯ & ಯುವನಿಧಿ: ಕೇಂದ್ರದ ಅಕ್ಕಿಗೆ ತಮ್ಮ ಸ್ಟಿಕ್ಕರ್ ಅಂಟಿಸಿದ್ದಾರೆ. ಯುವನಿಧಿ ಯೋಜನೆಯಡಿ ನೋಂದಣಿಯಾದ ಪದವೀಧರರ ಸಂಖ್ಯೆ ಶೇ. 20 ರಷ್ಟೂ ದಾಟಿಲ್ಲ. ಮೂರು ವರ್ಷಗಳಲ್ಲಿ ಬರೋಬ್ಬರಿ ₹2,46,000 ಕೋಟಿ ರೂ. ಹೊಸ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.

ದಲಿತ ಹಾಗೂ ರೈತ ವಿರೋಧಿ ಆಡಳಿತ:

ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಕಾಯ್ದೆಯಡಿ ದಲಿತರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ₹39,000 ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾನೂನುಬಾಹಿರವಾಗಿ ವರ್ಗಾಯಿಸಿ ದ್ರೋಹ ಬಗೆದಿದ್ದಾರೆ.•

NCRB ವರದಿಯ ಪ್ರಕಾರ ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನಕ್ಕೆ ತಲುಪಿದೆ. ಸುಮಾರು 2,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಪರಿಹಾರ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ.

ಹಾಲಿನ ಪ್ರೋತ್ಸಾಹಧನ ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳಲಾಗಿದೆ.

ಹಗರಣಗಳು ಮತ್ತು ಕಾನೂನು ಸುವ್ಯವಸ್ಥೆ ಕುಸಿತ:•

ಮುಡಾ (MUDA) ಭೂ ಹಗರಣ ಮತ್ತು ಮಹರ್ಷಿ ವಾಲ್ಮೀಕಿ ನಿಗಮದ ₹94 ಕೋಟಿ ಲೂಟಿ ಹಗರಣಗಳು ಸರ್ಕಾರದ ಭ್ರಷ್ಟ ಮುಖವನ್ನು ಬಯಲು ಮಾಡಿವೆ.

ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಈ ಸರ್ಕಾರವೇ ಹೊಣೆಯಾಗಿದೆ.• ರಾಜ್ಯಾದ್ಯಂತ ಮರಳು ಮಾಫಿಯಾ ಮತ್ತು ಡ್ರಗ್ ಜಾಲ ರಾಜಾರೋಷವಾಗಿ ನಡೆಯುತ್ತಿದೆ. ಮುದ್ಗಲ್ ಗಣೇಶ ಮೆರವಣಿಗೆಯ ಮೇಲಿನ ಕಲ್ಲು ತೂರಾಟವನ್ನು ಗೃಹ ಸಚಿವರು ‘ಸಣ್ಣ ಘಟನೆ’ ಎಂದು ಬೇಜವಾಬ್ದಾರಿಯಾಗಿ ಕರೆದಿದ್ದಾರೆ.

ಕಿರಗೋಡಿನಲ್ಲಿ ಹನುಮ ಧ್ವಜ ಇಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ.

ಮುಜರಾಯಿ ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟು, ಹಿಜಾಬ್ ವಿವಾದದ ಮೂಲಕ ಶಾಲೆಗಳನ್ನು ಕೋಮು ಧ್ರುವೀಕರಣದ ಕೇಂದ್ರವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.

ಅಭಿವೃದ್ಧಿ ಶೂನ್ಯವಾಗಿಸಿ, ರಾಜ್ಯವನ್ನು ಲೂಟಿ ಮಾಡುತ್ತಿರುವ ಈ ಜನವಿರೋಧಿ, ರೈತವಿರೋಧಿ ಸರ್ಕಾರದ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ನಮ್ಮ ಭಾರತೀಯ ಜನತಾ ಪಕ್ಷದ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.

Author