ಶಿವಮೊಗ್ಗ | ನೀರಿನ ಪಂಪ್ ನ ಕೇಬಲ್ ಕದಿಯುತ್ತಿದ್ದವನು ಈಗ ಪೊಲೀಸರ ಅತಿಥಿ

ಕ್ರೈಂ

ಶಿವಮೊಗ್ಗ,ತೀರ್ಥಹಳ್ಳಿ ತಾಲೂಕಿನ ನದಿ ತೀರದ ತೋಟಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 93 ಸಾವಿರ ರೂಪಾಯಿ ಮೌಲ್ಯದ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ತೀರ್ಥಹಳ್ಳಿ ತಾಲೂಕಿನ ನಿಡಗಳಲೆ ಗ್ರಾಮದ ಮುಡುಬಾ, ಮುಂಡುವಳ್ಳಿ ಗ್ರಾಮದ ಹೊಸಳ್ಳಿ ಹಾಗೂ ತೂದೂರು ಗ್ರಾಮದ ಸುತ್ತಮುತ್ತಲಿನ ರೈತರು ತಮ್ಮ ತೋಟಗಳಿಗೆ ನೀರು ಹಾಯಿಸಲು ತುಂಗಾ ನದಿಗೆ ಮೋಟಾರ್‌ಗಳನ್ನು ಅಳವಡಿಸಿದ್ದರು. ಆದರೆ, ಕಳ್ಳರು ಈ ಮೋಟಾರ್‌ಗಳ ಬೆಲೆಬಾಳುವ ಕೇಬಲ್ ವೈರುಗಳನ್ನು ಕತ್ತರಿಸಿ ಕಳ್ಳತನ ಮಾಡುತ್ತಿದ್ದರು.

ಈ ಬಗ್ಗೆ ರೈತರು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿ ಪೊಲಿಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಶಿವಮೊಗ್ಗದ ರಾಗಿಗುಡ್ಡದ 4ನೇ ಕ್ರಾಸ್ ನಿವಾಸಿ, ಕುಮಾರ ಎಸ್.ಕೆ (31 ವರ್ಷ) ಎಂದು ಗುರುತಿಸಲಾಗಿದೆ. ಬಂಧಿತನಿಂದ ಪೊಲೀಸರು, ಕಳವು ಮಾಡಲಾಗಿದ್ದ ಅಂದಾಜು 93,000 ರೂ. ಮೌಲ್ಯದ ಒಟ್ಟು 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ ವೈರ್‌ಗಳನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಕಳ್ಳತನದ ಕೃತ್ಯ ಎಸಗಲು ಆತ ಬಳಸುತ್ತಿದ್ದ ಅಂದಾಜು 30,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Author