ಶಿವಮೊಗ್ಗ | ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮನವಿ ತಿರಸ್ಕರಿಸಲು ಪ್ರಧಾನಿಗೆ ಈಶ್ವರಪ್ಪ ಆಗ್ರಹ

ರಾಜಕೀಯ

ಶಿವಮೊಗ್ಗ,ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಪತ್ರ ಬರೆಯಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನಗರದದಲ್ಲಿ ಇಂದು ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 18 ಬೇಡಿಕೆಗಳ ಮನವಿ ಸಲ್ಲಿಸಿದ್ದರು. ಆದರೆ, ಅದರಲ್ಲಿ ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ಕೋರಿರುವ ವಿಚಾರವೂ ಸೇರಿದೆ. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಆಗ ನಾವು ಇದನ್ನ ನೀವು ಮುಂದುವರೆಸಿದರೆ ಖಂಡಿತ ಅಧಿಕಾರ ಕಳೆದುಕೊಳ್ಳುತ್ತೀರ ಎಂಬ ಎಚ್ಚರಿಕೆಯನ್ನು ನೀಡಿದ್ದೆವು.

ಅದರಂತೆ ಇಂದು ಅವರು ಅಧಿಕಾರ ಕಳೆದುಕೊಂಡಿದ್ದಾರೆ ಎಂದರು.ಈ ಯೋಜನೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯ ಅಭಿಪ್ರಾಯಗಳನ್ನು ಆಲಿಸುವಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರದಲ್ಲಿ ಕೇವಲ ವ್ಯವಹಾರ ಮಾಡುವ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಈ ಇಡೀ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ DPR ಇಲ್ಲದೆಯೇ ಟೆಂಡರ್ ಕರೆದಿರುವ ಮೊದಲ ಯೋಜನೆ ಇದಾಗಿದ್ದು, ಇಲ್ಲಿ ಯಾವುದೇ ನೀತಿ-ನಿಯಮಗಳನ್ನು ಪಾಲಿಸಿಲ್ಲ ಎಂದು ಅವರು ದೂರಿದರು.

ಹಾಗೆಯೇ, ಸಿದ್ದರಾಮಯ್ಯ ಅವರ ದಡ್ಡತನಕ್ಕೆ ಮತ್ತು ಡಿ.ಕೆ. ಶಿವಕುಮಾರ್ ಅವರ ಬುದ್ಧಿವಂತಿಕೆಗೆ ಇಲ್ಲಿ ಅವಕಾಶ ನೀಡಬಾರದು.ಮುಖ್ಯಮಂತ್ರಿಗಳು ನೀಡಿರುವ ಈ ಮನವಿಯನ್ನು ಪ್ರಧಾನಿ ಮೋದಿ ಅವರು ಖಂಡಿತವಾಗಿ ತಿರಸ್ಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಕೇಂದ್ರದ ಅನೇಕ ತಜ್ಞರು ಸಹ ನಮ್ಮ ಹೋರಾಟ ಸರಿಯಾಗಿದೆ ಎಂದಿದ್ದಾರೆ ಎಂದು ಹೇಳಿದರು. ಈ ಕುರಿತು ಇಂದು ಮನವಿ ಪತ್ರವನ್ನುಸಲ್ಲಿಸಲಾಗುವುದು ಎಂದರು.

Author