ಶಿವಮೊಗ್ಗ,ಪ್ರಯಾಣಿಕರೊಬ್ಬರ ಬಳಿಯಿದ್ದ 3.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಳಗುಪ್ಪ ಟ್ರೈನ್ ಪ್ರಕರಣದ ಪೂರ್ತಿ ವಿವರ:
ಬೆಂಗಳೂರಿನ ನಿವಾಸಿ ಅಂಬಿಕಾ ಎಂಬವರು 12.03.2026 ರಂದು ತಮ್ಮ ಮಕ್ಕಳೊಂದಿಗೆ ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ (ರೈಲು ಸಂಖ್ಯೆ 20651) ಕೆಎಸ್ಆರ್ ಬೆಂಗಳೂರು ಸಿಟಿ ನಿಲ್ದಾಣದಿಂದ ಆನಂದಪುರಂಗೆ ಪ್ರಯಾಣಿಸುತ್ತಿದ್ದರು.
ಸಂಜೆ 8:15 ರ ಸಮಯ, ತಾಳಗುಪ್ಪ ಟ್ರೈನ್ ಕುಂಸಿ ನಿಲ್ದಾಣದಿಂದ ಮುಂದಕ್ಕೆ ಚಲಿಸಿದಾಗ, ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ 10,000 ರೂಪಾಯಿ ನಗದು ಇದ್ದ ಹ್ಯಾಂಡ್ಬ್ಯಾಗ್ ಕಳುವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಕುರಿತು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಸಂಬಂಧ ಆರ್ಪಿಎಫ್ ಸಿಬ್ಬಂದಿ, ಕುಂಸಿ ರೈಲು ನಿಲ್ದಾಣ ಹಾಗೂ ಸುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಆರ್ಪಿಎಫ್ ಶಿವಮೊಗ್ಗ, ಸಿಐಬಿ ಮೈಸೂರು ಹಾಗೂ ಸಿಪಿಡಿಎಸ್ ಮೈಸೂರು ಸಿಬ್ಬಂದಿಯ ವಿಶೇಷ ತಂಡ ರಚಿಸಿ ಜಿಆರ್ಪಿ ಶಿವಮೊಗ್ಗ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತನ ಚಲನವಲನಗಳನ್ನು 50 ಕಿಲೋಮೀಟರ್ ದೂರದ ಸಾಗರದವರೆಗೆ ಪತ್ತೆಹಚ್ಚಿದ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ದಾವಣಗೆರೆ ಮೂಲದವನು ಎಂದು ಖಚಿತಪಡಿಸಿಕೊಂಡಿದ್ದ ಸಿಬ್ಬಂದಿ ಅಂತಿಮವಾಗಿ ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿಯೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ದಾವಣಗೆರೆ ಜಿಲ್ಲೆಯ ನಿವಾಸಿ, ಜಿ.ಎಸ್. ಪಟೇಲ್ (23) ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ಹಾಗೂ ಅರಸೀಕೆರೆಯಲ್ಲಿ ನಡೆದ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಅವುಗಳ ವಿಚಾರಣೆ ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಜೊತೆಗೆ ತಿಪಟೂರು ಹಾಗೂ ದಾವಣಗೆರೆಯಲ್ಲಿ ಈತನ ವಿರುದ್ಧ ಎರಡು ಜಾಮೀನು ರಹಿತ ವಾರಂಟ್ಗಳು ಬಾಕಿ ಇವೆ .
ಆರೋಪಿಯನ್ನು ಶಿವಮೊಗ್ಗದ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮುಂದಿನ ತನಿಖೆಯನ್ನು ಜಿಆರ್ಪಿ ಶಿವಮೊಗ್ಗ ತಂಡ ಮುಂದುವರಿಸಿದೆ.


