ಶಿವಮೊಗ್ಗ | ಆಯನೂರು ಗೇಟ್ ಸರ್ಕಲ್ ಬಳಿ ಸಂಚಾರ ಬದಲಾವಣೆ

ಶಿವಮೊಗ್ಗ

ಶಿವಮೊಗ್ಗ,ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಆಯನೂರು ಗೇಟ್ ಸರ್ಕಲ್ ವ್ಯಾಪ್ತಿಯಲ್ಲಿ ವಾಹನ ಸವಾರರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹತ್ವದ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

ಆಯನೂರು ಗೇಟ್ ಸರ್ಕಲ್ ಪ್ರಸ್ತುತ ನಾಲ್ಕು ಪ್ರಮುಖ ರಸ್ತೆಗಳನ್ನು (ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಸಾಗರ ಕಡೆಗೆ, ಸಾಗರ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಹಾಗೂ ಗೋಪಾಳ ಮತ್ತು ಶರಾವತಿ ನಗರ ಕಡೆಗೆ) ಸಂಪರ್ಕಿಸುವ ಪ್ರಮುಖ ಛೇದಕವಾಗಿದೆ. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ನಿಯಂತ್ರಿಸಲು ಈಗಾಗಲೇ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ.

ಆದರೆ, ಈ ಸರ್ಕಲ್ ಬಳಿಯೇ ಆಟೋ ಕಾಂಪ್ಲೆಕ್ಸ್ ಇದ್ದು, ಅಲ್ಲಿ ಗ್ಯಾರೇಜ್ ಹಾಗೂ ವಾಹನ ದುರಸ್ತಿ ಅಂಗಡಿಗಳಿರುವುದರಿಂದ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿತ್ತು. ನಿಯಮದ ಪ್ರಕಾರ ಆಟೋ ಕಾಂಪ್ಲೆಕ್ಸ್‌ಗೆ ಹೋಗುವ ವಾಹನಗಳು ಎಪಿಎಂಸಿ ಮುಂಭಾಗದಲ್ಲಿರುವ ಡಿವೈಡರ್ ಬಳಸಿ ಚಲಿಸಬೇಕಾಗಿತ್ತು. ಆದರೆ, ಅನೇಕ ವಾಹನ ಸವಾರರು ಶಾರ್ಟ್‌ಕಟ್ ಹುಡುಕುತ್ತಾ ಆಯನೂರು ಗೇಟ್ ಸಿಗ್ನಲ್‌ನಲ್ಲಿ ಆಲ್ಕೋಳ ಸರ್ಕಲ್ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುವ ವಾಹನಗಳಿಗೆ ಎದುರಾಗಿ (ರಾಂಗ್ ಸೈಡ್) ಆಟೋ ಕಾಂಪ್ಲೆಕ್ಸ್ ಕಡೆಗೆ ಸಂಚರಿಸುತ್ತಿದ್ದರು.

ಇದರಿಂದಾಗಿ ಈ ಭಾಗದಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿತ್ತು.ನೂತನ ಆದೇಶ:ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಯನೂರು ಗೇಟ್ ಸಿಗ್ನಲ್‌ನಲ್ಲಿ ಆಲ್ಕೋಳ ಸರ್ಕಲ್ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುವ ವಾಹನಗಳಿಗೆ ಎದುರಾಗಿ ಆಟೋ ಕಾಂಪ್ಲೆಕ್ಸ್ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಎಂಟ್ರಿ’ ಆದೇಶ ಹೊರಡಿಸಲಾಗಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221(ಎ)(5) ರ ಅನ್ವಯ ಈ ಅಧಿಕೃತ ಅಧಿಸೂಚನೆಯನ್ನು ದಿನಾಂಕ 08.06.2026 ರಂದು ಹೊರಡಿಸಲಾಗಿದ್ದು, ವಾಹನ ಸವಾರರು ಕಡ್ಡಾಯವಾಗಿ ನಿಯಮ ಪಾಲಿಸಿ ಸಹಕರಿಸಬೇಕೆಂದು ಕೋರಲಾಗಿದೆ.

Author