ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಭವ್ಯ ‘ತಿರಂಗಾ ಯಾತ್ರೆ – ಬೈಕ್ ರ್‍ಯಾಲಿ’ : ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ

ಶಿವಮೊಗ್ಗ

ಶಿವಮೊಗ್ಗ, 79ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಹಾಗೂ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ, ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ಭವ್ಯ ‘ತಿರಂಗಾ ಯಾತ್ರೆ – ಬೈಕ್ ರ್‍ಯಾಲಿ’ಗೆ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ಚಾಲನೆ ನೀಡಿ, ಉತ್ಸಾಹಿ ಯುವಕರು ಹಾಗೂ ಕಾರ್ಯಕರ್ತರೊಂದಿಗೆ ಪಾಲ್ಗೊಂಡರು.

ಕೈಯಲ್ಲಿ ರಾರಾಜಿಸುತ್ತಿದ್ದ ತ್ರಿವರ್ಣ ಧ್ವಜ, ಮೊಳಗಿದ ‘ಭಾರತ್ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಂ’ ಜಯಘೋಷಗಳೊಂದಿಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ 500ಕ್ಕೂ ಹೆಚ್ಚು ಬೈಕ್‌ಗಳು ಸಾಗಿದವು. ಈ ಬೈಕ್ ರ್‍ಯಾಲಿಯು ನಗರದಾದ್ಯಂತ ಅಭೂತಪೂರ್ವ ದೇಶಭಕ್ತಿಯ ವಾತಾವರಣವನ್ನು ನಿರ್ಮಿಸಿತು. ಸ್ವಾತಂತ್ರ್ಯೋತ್ಸವದ ಸಂಭ್ರಮ ಹಾಗೂ ದೇಶಪ್ರೇಮದ ಸಂದೇಶವನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವಲ್ಲಿ ಯುವ ಮೋರ್ಚಾದ ಕಾರ್ಯಕರ್ತರ ಉತ್ಸಾಹ ಮತ್ತು ಶ್ರಮ ಶ್ಲಾಘನೀಯವಾಗಿತ್ತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಕೆ. ಜಗದೀಶ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಕುಕ್ಕೆ, ಯುವ ಮೋರ್ಚಾ ನಗರಾಧ್ಯಕ್ಷರಾದ ರಾಹುಲ್ ಬಿದರೆ, ಪ್ರಮುಖರಾದ ಎಸ್. ದತ್ತಾತ್ರಿ, ಜ್ಞಾನೇಶ್ವರ್, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ನವಲೆ, ದೀನ್ ದಯಾಳು ಸೇರಿದಂತೆ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ದೇಶಪ್ರೇಮಿ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

Author