ತೀರ್ಥಹಳ್ಳಿ ಬಿದರಗೋಡು ಕುಟುಂಬದ ಶ್ರೀಧರ್ ಅವರು ಮುಖ್ಯಮಂತ್ರಿ ವಿಶೇಷ ಕರ್ತವ್ಯಧಿಕಾರಿ ಜೊತೆಗೆ ನೂತನ ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯದರ್ಶಿಯಂತಹ ಅತ್ಯಂತ ಮಹತ್ವದ ಹಾಗೂ ಜವಾಬ್ದಾರಿಯುತ ಹುದ್ದೆಗೇರಿದ್ದಾರೆ.
ಈ ಸಂಬಂಧ ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ತಮ್ಮ ವಿಶ್ವಾಸನೀಯ ಪ್ರತಿಭೆ ಹಾಗೂ ಪ್ರಖರ ದಕ್ಷತೆಯ ಕಾರಣ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಎಚ್.ಕೆ.ಪಾಟೀಲ್ ರಂತಹ ರಾಜ್ಯ ರಾಜಕಾರಣದ ದಿಗ್ಗಜರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ಅವರ ಕಾರ್ಯ ಶೈಲಿ ಆಗ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದು ಅವರು ಉಪ ಮುಖ್ಯಮಂತ್ರಿಯಾದಾಗ ಅವರ ಆಪ್ತ ಕಾರ್ಯದರ್ಶಿಯಾದರು.
ಇದೀಗ ಮುಖ್ಯಮಂತ್ರಿ ಆದಾಗಲೂ ಶಿವಕುಮಾರ್ ಶ್ರೀಧರ್ ಅವರ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇರಿಸಿ ಅವರನ್ನು ಸರ್ಕಾರದ ಪದ ನಿಮಿತ್ತ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇದರಿಂದ ಶ್ರೀಧರ್ ಇನ್ನು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸುಲಲಿತ ಆಡಳಿತಕ್ಕೆ ಬೇಕಾದ ಸಂದರ್ಭ ಸೃಷ್ಟಿ. ಮುಖ್ಯಮಂತ್ರಿ ಕಚೇರಿಯ ದೈನಂದಿನ ಆಡಳಿತ ನಿರ್ವಹಣೆ, ಆಡಳಿತ ಸುಗಮವಾಗಿ ಸಾಗಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರಮುಖ ಪಾತ್ರ ವಹಿಸುವುದು ಶ್ರೀಧರ್ ಅವರ ಜವಾಬ್ದಾರಿಯಾಗಲಿದೆ.
ಜೊತೆಗೆ ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಇನ್ನಿತರ ಜನಪರ ಯೋಜನೆಗಳ ಸಮರ್ಪಕ ಉಸ್ತುವಾರಿ ಮತ್ತು ಅನುಷ್ಠಾನದ ಮೇಲ್ವಿಚಾರಣೆ. ಇವೆಲ್ಲದರ ಜೊತೆಗೆ ನೂತನ ಮುಖ್ಯಮಂತ್ರಿಗೆ ತಮ್ಮ ಆಡಳಿತಾತ್ಮಕ ಅನುಭವದಿಂದ ಪರಿಣಾಮಕಾರಿಯಾದಂತ ಜನಪರ ಸಲಹೆ ನೀಡುವುದು ಮತ್ತು ಮುಖ್ಯವಾಗಿ ನೀತಿ ನಿರೂಪಣೆ ವಿಚಾರದಲ್ಲಿ ರಾಜ್ಯದ ಸಮಗ್ರ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುನ್ನಡೆಯಲು ಬೇಕಾದ ಸಲಹೆ ನೀಡುವುದು ಅವರ ಜವಾಬ್ದಾರಿಯಾಗಲಿದೆ.
ಬಿದರಗೋಡು ಶ್ರೀಧರ್ ಲೋಕೋಪಯೋಗಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ, ತೀರ್ಥಹಳ್ಳಿ ತುಂಗಾ ಕಾಲೇಜು ನಿವೃತ್ತ ಪ್ರಾಂಶುಪಾಲ ಬಿ.ಎಸ್.ನಾಗರಾಜ್ ಅವರ ಸಹೋದರ. ಸಜ್ಜನ ರಾಜಕಾರಣಿ, ತೀರ್ಥಹಳ್ಳಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚಿಂದ್ರ ಹೆಗಡೆ ಶ್ರೀಧರ್ ರವರ ಸೋದರಳಿಯ.
ಎರಡನೆಯದಾಗಿ, ಕೆಲವು ದಿನದ ಹಿಂದೆ ತೀರ್ಥಹಳ್ಳಿ ಅಳಿಯ ವಿನಯ್ ಕಾರ್ತಿಕ್ ಕಾಂಗ್ರೆಸ್ ಪಕ್ಷದ ಐದನೇ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದರು.


