ಶಿವಮೊಗ್ಗ, ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹1.50 ಕೋಟಿ ಮೌಲ್ಯದ ಅಡಿಕೆಯನ್ನು ಚಾಲಕ ಮತ್ತು ಆತನ ಸಹಚರರು ಸೇರಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಶಿವಮೊಗ್ಗದ ಮ್ಯಾಮ್ಕೋಸ್ನಿಂದ ಬೆಂಗಳೂರಿನ ಯಶವಂತಪುರಕ್ಕೆ 350 ಚೀಲ ಅಡಿಕೆ ಲೋಡ್ ಮಾಡಿಕೊಂಡು ಲಾರಿ ತೆರಳಿತ್ತು. ಆದರೆ ಚಾಲಕ ಮತ್ತು ಆತನ ಸಹಚರರು ನಿಗದಿತ ಸ್ಥಳಕ್ಕೆ ಅಡಿಕೆ ತಲುಪಿಸದೆ ಲಾರಿಯೊಂದಿಗೆ ಪರಾರಿಯಾಗಿದ್ದಾರೆ.
ಕಳುವಾದ ಅಡಿಕೆಯ ಒಟ್ಟು ಅಂದಾಜು ಮೌಲ್ಯ ₹1,50,21,760 ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.



