ಶಿವಮೊಗ್ಗ, ನಗರದ ಪಾರ್ಕ್ ಬಡಾವಣೆಯಲ್ಲಿರುವ ಲಾಡ್ಜ್ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನೆಲೆ ನಗರದ ಜಯನಗರಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆಬ್ರವರಿ 7ರ ಮಧ್ಯಾಹ್ನ ಲಾಡ್ಜ್ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ಕೂಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಸಿಬ್ಬಂದಿ, ನಿಮ್ಮ ಈ ವರ್ತನೆಯಿಂದ ಇತರ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಸುಮ್ಮನೆ ಇರಿ ಎಂದು ಕೇಳಿ ಕೊಂಡಿದ್ದರು.
ಅಷ್ಟಕ್ಕೆ ಕೋಪಗೊಂಡ ಆರೋಪಿ ಮಧ್ಯಾಹ್ನ ಸುಮಾರಿಗೆ ಸಿಬ್ಬಂದಿಗಳು ಊಟ ಮಾಡುತ್ತಿದ್ದ ಕೊಠಡಿಗೆ ನುಗ್ಗಿ ಬಾಗಿಲನ್ನು ಕಾಲಿನಿಂದ ಒದ್ದು ಪುಡಿಪುಡಿ ಮಾಡಿದ್ದಾನೆ.
ಈ ವೇಳೆ ಮಹಿಳಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ಲೆಕ್ಕಿಸದೆ, ನನಗೆ ಬುದ್ಧಿವಾದ ಹೇಳಲು ನೀವ್ಯಾರು? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮುರಿದು ಬಿದ್ದಿದ್ದ ಬಾಗಿಲಿನ ಅಲ್ಯೂಮಿನಿಯಂ ಪಟ್ಟಿಯನ್ನು ಹಿಡಿದುಕೊಡು ಇಬ್ಬರ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನು ತಡೆಯಲು ಹೋದ ಮಹಿಳಾ ಸಿಬ್ಬಂದಿಯ ಬಟ್ಟೆ ಹಿಡಿದು ಎಳೆದಾಡಿದ ಆರೋಪಿಯು, ಅವರನ್ನು ಜೋರಾಗಿ ತಳ್ಳಿ ಒಬ್ಬನ ಮೇಲೆ ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



