ಹೊಸನಗರ,ರಸ್ತೆಗೆ ದಿಢೀರ್ ಅಡ್ಡಬಂದ ಕಾಡುಪ್ರಾಣಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಕಾರನ್ನು ಬದಿಗೆ ತಿರುಗಿಸಿದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಮಾರ್ಗದ ನೂಲಿಗ್ಗೇರಿ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಸಾಗರದ ಪ್ರಕಾಶ್ ಎಂಬುವವರು ಮಣಿಪಾಲದಿಂದ ಸಾಗರದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನೂಲಿಗ್ಗೇರಿ ಸಮೀಪದ ರಸ್ತೆಯಲ್ಲಿ ಕಾಡುಪ್ರಾಣಿಯೊಂದು ಏಕಾಏಕಿ ಕಾರಿನ ಎದುರು ಬಂದಿದ್ದು, ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದೆ ಎನ್ನಲಾಗಿದೆ.
ಕಾರಿನ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು, ಕೆಲವೇ ಕ್ಷಣಗಳಲ್ಲಿ ಕಾರಿನ ಮೇಲೆಯೇ ಬಿದ್ದಿದೆ. ಘಟನೆಯಿಂದ ಕಾರಿಗೆ ಹಾನಿಯಾಗಿದೆ.ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಪ್ರಕಾಶ್ ಸೇರಿದಂತೆ ಮೂವರು ಮಕ್ಕಳು ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ವಿದ್ಯುತ್ ಕಂಬ ನೇರವಾಗಿ ಕಾರಿನ ಮೇಲೆ ಬಿದ್ದಿದ್ದರೂ ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂಬ ಮಾಹಿತಿಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ನಗರ ಠಾಣೆ ಪಿಎಸ್ಐ ಶಿವಾನಂದ ಕೋಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





