ಶಿವಮೊಗ್ಗ | ತೀರ್ಥಹಳ್ಳಿ ತಡೆಗೋಡೆ ಕುಸಿತ ಪ್ರಕರಣ : ಜಾಗದ ಮಾಲೀಕ, ಗುತ್ತಿಗೆದಾರನ ವಿರುದ್ಧ ಎಫ್ಐಆರ್

ಶಿವಮೊಗ್ಗ

ಶಿವಮೊಗ್ಗ, ಭಾನುವಾರ ಬೆಳಗಿನ ಜಾವ ತೀರ್ಥಹಳ್ಳಿಯ ಸಿಬಿನಕೆರೆಯ ಗಾಂಧಿನಗರದಲ್ಲಿ ನಡೆದ ತಡೆಗೋಡೆ ಕುಸಿತ ಪ್ರಕರಣದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುರಂತ ನಡೆದ ಜಾಗ ರಮೇಶ್ ಗೌಡ ಎಂಬುವರಿಗೆ ಸೇರಿದ್ದು, ಕೊಪ್ಪಳ, ದಾವಣಗೆರೆ ಜಿಲ್ಲೆಯಿಂದ ಕೂಲಿ ಕೆಲಸಕ್ಕೆಂದು ಬಂದಿದ್ದವರು ಇವರ ಜಾಗದಲ್ಲಿಯೇ ಶೆಡ್ ಹಾಕಿಕೊಂಡಿದ್ದರು. ಈ ಶೆಡ್ಅನ್ನು ಗುಡ್ಡ ಹಾಗೂ ತಡೆಗೋಡೆಯ ಕೆಳ ಭಾಗದಲ್ಲಿ ನಿರ್ಮಿಸಿಕೊಡಲಾಗಿತ್ತು.

ಈ ಶೆಡ್​​ನಲ್ಲಿ ಸುಮಾರು 25 ಜನ ವಾಸವಾಗಿದ್ದರು. ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಲು ಕಾರಣವಾಗಿದ್ದು, ತಡೆಗೋಡೆ. ಇದು ಬೀಳುತ್ತದೆ ಎಂಬ ಮಾಹಿತಿ ಇದ್ದರೂ ಅಲ್ಲಿ ಶೆಡ್ ನಿರ್ಮಿಸಿಕೊಂಡಿರಲು ಅನುಮತಿ ನೀಡಿ, ಅವರಿಂದ ಬಾಡಿಗೆ ಪಡೆಯಲಾಗುತ್ತಿತ್ತು.‌

ಇದರಿಂದ ನಿರ್ಲಕ್ಷ್ಯದ ಆರೋಪದಡಿ ಹಾಗೂ ಕೆಲಸಗಾರರನ್ನು ಕೆಲಸಕ್ಕೆ‌ ಕರೆದುಕೊಂಡು ಬಂದ ಗುತ್ತಿಗೆದಾರ ಅಂಜನಪ್ಪ ಅವರ ವಿರುದ್ಧ ಸಹ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿರುವ ಕೊಪ್ಪಳ ಜಿಲ್ಲೆಯ ಕಕ್ಕರಗೊಳ್ಳ ಗ್ರಾಮದ ಹನುಮಂತು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ‌.‌ ಹನುಮಂತ ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು BNS 2026 (105, 125[ a] 3( 5) ರಂತೆ ದೂರು ದಾಖಲಾಗಿದೆ.
ದೂರು ದಾಖಲಾಗಿರುವ ರಮೇಶ್ ಗೌಡನ ಮನೆ ಮೇಲೂ ಸಹ ತಡೆಗೋಡೆ ಬಿದ್ದು, ಮನೆ ಭಾಗಶಃ ಹಾನಿಗೆ ಒಳಗಾಗಿದೆ‌‌.

ಗಾಯಗೊಂಡಿರುವ ರಮೇಶ್ ಗೌಡ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುತ್ತಿಗೆದಾರ ಅಂಜನಪ್ಪ ತಲೆ ಮರೆಸಿಕೊಂಡಿದ್ದಾನೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

Author