ಶಿವಮೊಗ್ಗ | ಮುಂಗಾರು ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ; ಸಾಲ ಪಡೆದ ರೈತರಿಗೆ ಅವಕಾಶ

ಶಿವಮೊಗ್ಗ

ಶಿವಮೊಗ್ಗ ,2026ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಲು ಸಾಲ ಪಡೆದ ರೈತರಿಗೆ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮುಸುಕಿನ ಜೋಳ (ನೀರಾವರಿ/ಮಳೆ ಆಶ್ರಿತ) ಬೆಳೆಗೆ ವಿಮೆ ನೋಂದಾಯಿಸಲು ಮುಕ್ತಾಯವಾಗಿದ್ದ ಜುಲೈ 31 ರ ಗಡುವನ್ನು, ರೈತರ ಕೋರಿಕೆಯ ಮೇರೆಗೆ ಸಾಲ ಪಡೆದ ರೈತರಿಗೆ ಮಾತ್ರ ಅನ್ವಯವಾಗುವಂತೆ ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ.

ಆಯ್ದ ಹೋಬಳಿಗಳಲ್ಲಿ ರಾಗಿ (ಮಳೆ ಆಶ್ರಿತ) ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಭತ್ತ (ನೀರಾವರಿ/ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ/ಮಳೆ ಆಶ್ರಿತ) ಮತ್ತು ರಾಗಿ (ಮಳೆ ಆಶ್ರಿತ) ಬೆಳೆಗಳು ಈ ಯೋಜನೆಗೆ ಆಯ್ಕೆಯಾಗಿವೆ.

ಸರ್ಕಾರದ ವತಿಯಿಂದ ‘ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿ’ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಸಾಲ ಪಡೆದ ರೈತರಿಗೆ ಕಡ್ಡಾಯ ನಿಯಮ: ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ಯೋಜನೆಯಡಿ ಒಳಪಡಿಸಲಾಗುತ್ತದೆ. ಒಂದು ವೇಳೆ ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ಬೆಳೆ ನೋಂದಣಿ ಅಂತಿಮ ದಿನಾಂಕಕ್ಕೆ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡುವ ಮೂಲಕ ಹೊರಗುಳಿಯಬಹುದು.

ಬೆಳೆ ಸಾಲ ಪಡೆಯದ ರೈತರು ತಮ್ಮ ಭೂಮಿಯ ದಾಖಲೆಯಾದ ಪಹಣಿ ಮತ್ತು ಆಧಾರ್ ಸಂಖ್ಯೆಯೊಂದಿಗೆ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್ ಸಿ) ನೋಂದಾಯಿಸಿಕೊಳ್ಳಬಹುದು. ಬಿತ್ತನೆ ಅಥವಾ ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೂ ನೋಂದಾಯಿಸಲು ಅವಕಾಶವಿರುತ್ತದೆ.

ರೈತರು ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ ಹಾಗೂ ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹಾಗೂ ಹೆಚ್ಚಿನ ವಿವರಗಳಿಗಾಗಿ http://samrkshane.karnataka.gov.in ವೆಬ್‌ಸೈಟ್ ಅನ್ನು ಕೂಡ ಭೇಟಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Author