ಶಿವಮೊಗ್ಗ | ಯೋಗದಿಂದ ಜೀವನದ ಉನ್ನತಿ : ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ

ಶಿವಮೊಗ್ಗ

ಶಿವಮೊಗ್ಗ, ಉತ್ತಮ ಆರೋಗ್ಯ ಮನುಷ್ಯನಿಗೆ ಅಮೂಲ್ಯ ಆಸ್ತಿ. ಉನ್ನತ ಸಾಧನೆಗೆ ಯೋಗ, ಧ್ಯಾನ ಹಾಗೂ ಕಠಿಣ ಪರಿಶ್ರಮ ರಹದಾರಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಬಸವನಗುಡಿಯ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ ವತಿಯಿಂದ ನಡೆದ ಸರ್ಕಾರಿ ನೌಕರರ ವಿಕಾಸ ಕೇಂದ್ರ ಶಿವಮೊಗ್ಗ ಯೋಗ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉನ್ನತ ಸಾಧನೆಗೆ ಯೋಗ, ಧ್ಯಾನ ಸಹಕಾರಿ. ಸಮಾಜಮುಖಿ, ಜನಪರ ಕಾರ್ಯಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಇಂಥಹ ಶಿಬಿರದ ಯಶಸ್ಸಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದರು.

ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷ, ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯರು ಮಾತನಾಡಿ, ಆಧುನಿಕ ಯುಗದಲ್ಲಿ ಒತ್ತಡದ ಜೀವನ ಶೈಲಿ, ಕ್ರಮಬದ್ಧವಲ್ಲದ ಆಹಾರ ಸೇವನೆಯಿಂದಾಗಿ ಹಲವರು ವಿವಿಧ ರೋಗಗಳಿಂದ ನರಳುವಂತಾಗಿದೆ. ಇದಕ್ಕೆಲ್ಲಾ ಯೋಗ ಪರಿಹಾರ. ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು. ದಿನಕ್ಕೆ ಒಂದು ಗಂಟೆ ನಿರಂತರವಾಗಿ ಯೋಗ ಮಾಡುವುದರಿಂದ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ಮನುಷ್ಯನಿಗೆ ಬಿಪಿ, ಶುಗರ್ ಬಂದರೆ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಎಲ್ಲರಿಗೂ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್. ರುದ್ರೇಗೌಡ್ರು ಮಾತನಾಡಿ, ಪ್ರತಿಯೊಬ್ಬರು ಯೋಗ ಶಿಕ್ಷಣ ಪಡೆದು ರೋಗದಿಂದ ಮುಕ್ತರಾಗಬೇಕು. ಪ್ರತಿದಿನ ನಾವು ಸರಳ ಯೋಗಾಭ್ಯಾಸವನ್ನು ಕಾಲಮಿತಿ ಅನುಗುಣವಾಗಿ ಕನಿಷ್ಠ ಅರ್ಧ ಗಂಟೆಯಾದರೂ ತಪ್ಪದೇ ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಔಷಧಿ, ಖರ್ಚಿಲ್ಲದೆ ಆರೋಗ್ಯ ಪಡೆಯುವ ಸುಲಭ ವಿಧಾನ. ಭಾರತದ ಯೋಗ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನೂರಾರು ದೇಶಗಳು ನಮ್ಮ ಯೋಗ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಯೋಗದಿಂದ ಕೆಲಸದಲ್ಲಿ ಕಾರ್ಯದಕ್ಷತೆ ಹೆಚ್ಚುವುದರಿಂದ ದೇಶದ ಆರ್ಥಿಕ ಪ್ರಗತಿಗೂ ಇದು ಬುನಾದಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಮಾತನಾಡಿ, ಮನುಷ್ಯನಿಗೆ ಯೋಗ, ವಾಕಿಂಗ್, ಕ್ರೀಡೆ ಯಾವುದಾದರೂ ದೈಹಿಕ ಕಸರತ್ತು ಅಗತ್ಯ. ಇದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ಮನಸ್ಸಿಗೆ ಶಾಂತಿ, ಉತ್ಸಾಹ ದೊರೆಯುತ್ತದೆ. ಪ್ರತಿಯೊಬ್ಬರೂ ಯೋಗದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿಗಳಾದ ಎಚ್. ಎo. ಚಂದ್ರಶೇಖರಯ್ಯ ಮಾತನಾಡಿ, ಯೋಗದಿಂದ ಶಿಸ್ತು, ಸಂಯಮ, ತಾಳ್ಮೆ ಮೂಡುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕವಾಗಿದೆ. ಯುವಜನತೆ ಯೋಗಾಭ್ಯಾಸವನ್ನು ರೂಡಿ ಸಿಕೊಳ್ಳುವುದರಿಂದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ವಿಜಯ ಬಾಯರ್, ಜಿ.ಎಸ್. ಓಂಕಾರ್, ಎಚ್.ಎಸ್. ಹರೀಶ್, ಕೇಶವಮೂರ್ತಿ, ಕೃಷ್ಣ ಹಾಗೂ ಇಳoಗೋವನ್ ಅವರಿಗೆ ಸನ್ಮಾನಿಸಲಾಯಿತು.

Author