ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ಜಾಗದ ವಿಚಾರಕ್ಕೆ ರಿಪ್ಪನ್ಪೇಟೆಯಲ್ಲಿ ಜೋರು ಮಾತಿನ ಪೈಟ್ ನಡೆದು, ಪರಸ್ಪರ ತಳ್ಳಾಡಿದ ಘಟನೆ ನಡೆದಿದೆ.
ಇಲ್ಲಿನ ಬರುವೆ ರಸ್ತೆಯಲ್ಲಿರುವ ಹಳೆಯ ಸಂತೆ ಮಾರ್ಕೆಟ್ ವ್ಯಾಪ್ತಿಗೆ ಸೇರಿರುವ ಪಂಚಾಯಿತಿ ಆಡಳಿತದ ಅಧೀನದ ಜಾಗವನ್ನು ರಾತ್ರೋರಾತ್ರಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ಫೈಟ್ ನಡೆದಿದೆ.
ಅಂತಿಮವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಒತ್ತುವರಿ ತೆರವುಗೊಳಿಸಲಾಗಿದೆ.ಇಲ್ಲಿನ ಸರ್ವೆ ನಂಬರ್ 43ರಲ್ಲಿ ಬರುವ ನಿವೇಶನವನ್ನು ನಿಯಮಬಾಹಿರವಾಗಿ ಆಕ್ರಮಿಸಿಕೊಳ್ಳಲಾಗಿದೆ.
ಅಲ್ಲಿ ಟೆಂಟ್ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಪಂಚಾಯಿತಿ ಆಡಳಿತ ಮಂಡಳಿ ಮೊನ್ನೆ ಶನಿವಾರದಂದು ಕಾರ್ಯಾಚರಣೆ ನಡೆಸಿ ಒತ್ತುವರಿಯಾದ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಆದರೆ ಈ ತೆರವು ಕಾರ್ಯಾಚರಣೆಗೆ ಒತ್ತುವರಿದಾರರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. 1991ನೇ ಇಸವಿಯಲ್ಲಿಯೇ ಗ್ರಾಮ ಪಂಚಾಯಿತಿಯು ತಮಗೆ ಅಧಿಕೃತವಾಗಿ ಹಕ್ಕುಪತ್ರವನ್ನು ನೀಡಿದ್ದು, ಆ ದಾಖಲೆಗಳು ತಮ್ಮ ಬಳಿ ಸುರಕ್ಷಿತವಾಗಿವೆ ಎಂಬುದು ಅವರ ಸಮರ್ಥನೆಯಾಗಿದೆ.
ಇದೆ ಕಾರಣಕ್ಕೆ ಒತ್ತುವರಿದಾರರು ಹಾಗೂ ತೆರವು ಕಾರ್ಯಾಚರಣೆಗೆ ಮುಂದಾದ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಮಾಜಿ ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟು, ಸ್ಥಳದಲ್ಲಿ ಗೌಜು ಗಲಾಟೆಯಾಯ್ತು.ಇಷ್ಟೆ ಅಲ್ಲದೆ ಇದೇ ವಿಚಾರದಲ್ಲಿ ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಎರಡೂ ಗುಂಪಿನವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ ರಿಪ್ಪನ್ ಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ರಿಜಿಸ್ಟರ್ ಮಾಡಿದ್ದಾರೆ.
ಈ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರುಗಳಾದ ನಿರೂಷ್ ಕುಮಾರ್, ಪ್ರಕಾಶ್, ಮಲ್ಲಿಕಾರ್ಜುನ್, ಪಾಲೇಕರ್ ಹಾಗೂ ಸುಂದರೇಶ್ ಅವರುಗಳು ಉಪಸ್ಥಿತರಿದ್ದರು.
ಇವರೊಂದಿಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರಾದ ನಾಗೇಶ್ ಮೋರೆ ಮತ್ತು ರಾಜೇಶ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.



