ಶಿವಮೊಗ್ಗ, ವಿಶ್ವ ಮಹಿಳಾ ದಿನಾಚರಣೆಯನ್ನು ನಗರದ ಬಿವಿಐ ಮಹಿಳೆಯರು ಅರ್ಥಗರ್ಭಿತವಾಗಿ ಆಚರಿಸುತ್ತಿರುವುದು ಖುಷಿ ತಂದಿದೆ ಎಂದು ಶಿವಮೊಗ್ಗ ಎಸ್.ಪಿ. ನಿಖಿಲ್ ಹೇಳಿದರು.
ಶಿವಮೊಗ್ಗದ ಭಾವಸಾರ ವಿಷನ್ ಇಂಡಿಯಾ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಸ್ತೆ ಸಂಚಾರ ಸುರಕ್ಷತೆಗಾಗಿ ಹೆಲ್ಮೆಟ್ ಕಡ್ಡಾಯ ಎಂಬ ಬೈಕ್ ರ್ಯಾಲಿ ಗೆ ಹಸಿರು ನಿಶಾನೆ ತೋರುವುದರ ಮೂಲಕ ಹರ್ಷ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆಯನ್ನು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆಚರಿಸುತ್ತಿರುವುದು, ಪೊಲೀಸರ ಕೆಲಸಕ್ಕೆ ಕೈ ಜೋಡಿಸಿದಂತಿದೆ.
ಅದರಲ್ಲೂ ಹೆಲ್ಮೆಟ್ ಕಡ್ಡಾಯವಾಗಿ ಎಲ್ಲಾ ವಾಹನ ಸವಾರರು ಧರಿಸಲೇಬೇಕಾಗಿದ್ದು, ಹಿಂದೆ ಕೂರುವವರು ಕೂಡ ಧರಿಸಲೇಬೇಕು. ನಿಮಗಾಗಿ ಅಲ್ಲದೇ, ನಿಮ್ಮ ಮನೆಯ ಕುಟುಂಬ ಸದಸ್ಯರಿಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಸೂಕ್ತ ಎಂದರು.
ನಿಮ್ಮ ಈ ಜನ ಜಾಗೃತಿ ರ್ಯಾಲಿ ನೋಡಿಯಾದರೂ, ಇತರರು ಹೆಲ್ಮೆಟ್ ಧರಿಸುವಂತಾಗಲಿ ಎಂದು ಹಾರೈಸಿದರು.
ಇನ್ನು ಮಹಿಳಾ ದಿನಾಚರಣೆ ದಿನದಂದೇ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸುತ್ತಿರುವುದಕ್ಕೆ ಶ್ಲಾಘಿಸಿದರು.
ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಪ್ರಮುಖ ಪಾತ್ರ ವಹಿಸಿರುವುದು ನಮ್ಮ ಕಣ್ಣ ಮುಂದೆ ಇದೆ. ಜೀವ ಉಳಿಸಿಕೊಳ್ಳಲು, ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲನೆಯೊಂದಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂದು ಸೂಚಿಸಿದರು.
ಇನ್ನು ಬೈಕ್ ರ್ಯಾಲಿಯೂ ಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ಫ್ರೀಡಂ ಪಾರ್ಕ್ ನಲ್ಲಿ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಬಿವಿಐ ಮಹಿಳೆಯರಿಗೆ ಹಾಗೂ ನೆರೆದಿದ್ದವರಿಗೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸ್ವಪ್ನ ಅವರು, ಸುರಕ್ಷಿತ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮಾಹಿತಿ ನೀಡಿದರು.
ಸುಮಾರು 60 ಕ್ಕೂ ಹೆಚ್ಚು ಮಹಿಳೆಯರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಬಿವಿಐ ಅಧ್ಯಕ್ಷ ಡಿ.ಪಿ. ಕಮಲಾಕರ್, ಕಾರ್ಯದರ್ಶಿ ಚೇತನಾ ಅಂಬೋರೆ, ಖಜಾಂಚಿ ಲತಾ ಬೇದ್ರೆ, ಮಹಿಳಾ ಕಲ್ಯಾಣ ನಿರ್ದೇಶಕಿ ಜಾನವಿ, ವಾಣಿ, ಮಮತಾ, ಕೋಮಲ್, ಪ್ರಭಾಕರ್ ವಂಡ್ಕರ್, ವಿನಯ್ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.



