ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹೊಸ ವರ್ಷಾಚರಣೆ 2026 ರ ಸಂಭ್ರಮ ಕಳೆಗಟ್ಟಿತ್ತು. ಈ ನಡುವೆ ಹಲವೆಡೆ ರಸ್ತೆ ಅಪಘಾತಗಳು ವರದಿಯಾಗಿವೆ.
ನಗರದ ಹೊರವಲಯ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು, ಸವಾರ ಮೃತಪಟ್ಟ ಘಟನೆ ಜನವರಿ 1 ರ ಮುಂಜಾನೆ ನಡೆದಿದೆ.
ಹೊಳೆಹೊನ್ನೂರಿನ ನಿವಾಸಿ ನಿಜಾಮುದ್ದೀನ್ (32) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಆಯನೂರಿಗೆ ತೆರಳುವ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಶಿವಮೊಗ್ಗ ನಗರದ ಕರ್ನಾಟಕ ಸಂಘದ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು ಬೈಕ್ ಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾದ ವರದಿಗಳು ಬಂದಿವೆ.
ತೀರ್ಥಹಳ್ಳಿ, ತಾಲೂಕಿನ ಕಟ್ಟೆಹಕ್ಲು ಸಮೀಪ ಚಲಿಸುತ್ತಿದ್ದ ಸರ್ಕಾರಿ ಬಸ್ ವೊಂದರ ಸ್ಟೇರಿಂಗ್ ಕಟ್ ಆದ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಸಂಭಾವ್ಯ ದುರಂತವೊಂದು ತಪ್ಪಿದೆ.ಸುಮಾರು 50 ಪ್ರಯಾಣಿಕರಿದ್ದ ಸರ್ಕಾರಿ ಬಸ್ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟಿದ್ದ ವೇಳೆ ಘಟನೆ ನಡೆದಿದೆ.
ಸ್ಟೇರಿಂಗ್ ತುಂಡರಿಸುತ್ತಿದ್ದಂತೆ, ಚಾಲಕ ಬಸ್ ನಿಯಂತ್ರಣಕ್ಕೆ ತಂದು ರಸ್ತೆ ಬದಿ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದ ಬಸ್ ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲವೆಂದು ತಿಳಿದುಬಂದಿದೆ.



