ಶಿವಮೊಗ್ಗ | ಮಧು ಬಂಗಾರಪ್ಪ ಜಿಲ್ಲಾ ಪ್ರವಾಸ ಆ. 7ರಿಂದ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ‌ಕುಮಾರ್

ರಾಜಕೀಯ

ಶಿವಮೊಗ್ಗ,ಸಚಿವ ಮಧು ಬಂಗಾರಪ್ಪನವರು ಶಿಕ್ಷಣ ಇಲಾಖೆಯಲ್ಲಿ ತಂದಂತಹ ಅಮೂಲಾಗ್ರ ಬದಲಾವಣೆಯನ್ನು ಗಮನಿಸಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರಿಗೆ ಮತ್ತೊಮ್ಮೆ ಶಿಕ್ಷಣ ಸಚಿವ ಖಾತೆಯನ್ನೇ ನೀಡುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅನೇಕ ದಿನಗಳಿಂದ ನಾವೆಲ್ಲರೂ ಬಹಳ ಕುತೂಹಲದಿಂದ ಕಾದು ಕುಳಿತಿದ್ದ ಸಚಿವ ಸಂಪುಟ ಪುನಾರಚನೆ ಕೊನೆಗೂ ಪೂರ್ಣಗೊಂಡಿದೆ. ನಮ್ಮ ಜಿಲ್ಲೆಯ ಮಧು ಬಂಗಾರಪ್ಪನವರು ಮತ್ತೊಮ್ಮೆ ಸಚಿವರಾಗಿದ್ದಾರೆ. ಅವರ ಇಲಾಖೆಯಲ್ಲಿ ಮಾಡಿದ ಕೆಲಸವನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಮಧು ಬಂಗಾರಪ್ಪನವರು ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಾಜ್ಯದಲ್ಲಿ 1,000 ಕೆಪಿಎಸ್ ಶಾಲೆಗಳನ್ನು ತೆರೆಯಲು ಯೋಚಿಸಿದ್ದಾರೆ. ಈ ಶಾಲಾ ಯೋಜನೆಯ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲೇ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ; ಶೀಘ್ರದಲ್ಲೇ ಆ ಕಾರ್ಯಕ್ರಮ ನಡೆಯಲಿದೆ.

ಅಜೀಮ್ ಪ್ರೇಮ್‌ಜಿ ಅವರಿಂದ ಶಾಲೆಗಳಲ್ಲಿ ಮೊಟ್ಟೆ ವಿತರಿಸಲು 1,580 ಕೋಟಿ ರೂ. ನೆರವು ತಂದಿದ್ದಾರೆ ಹಾಗೂ ಸಿಎಸ್‌ಆರ್ ಫಂಡ್‌ನಿಂದ ಕೆಪಿಎಸ್ ಶಾಲೆಗಳಿಗೆ ಹಣ ಒದಗಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಈಗಲೂ ಅವರಿಗೆ ಶಿಕ್ಷಣ ಖಾತೆಯೇ ಸಿಗಬಹುದು ಎನ್ನುವ ನಿರೀಕ್ಷೆ ನಮಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1.2 ಲಕ್ಷ ಮತದಾರರು ಡಿಲೀಟ್?

ಜಿಲ್ಲೆಯಲ್ಲಿ ಸುಮಾರು 120000 ವೋಟರ್ ಐಡಿ ಕಡಿಮೆಯಾಗಿವೆ. ಈ ಹಿಂದೆ ಅನೇಕ ಕಡೆ ಜೀವಂತ ಇದ್ದವರನ್ನು ಸಹ ಮೃತಪಟ್ಟಿದ್ದಾರೆ ಎಂದು ತೋರಿಸಲಾಗಿತ್ತು. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಹಚ್ಚುವ ಕಾರ್ಯವನ್ನು ನಮ್ಮ ಕಾರ್ಯಕರ್ತರೊಂದಿಗೆ ಮಾಡಲಾಗುತ್ತದೆ ಎಂದ ಅವರು, ಬಿಎಲ್‌ಒ ಗಳಿಗೆ ಅಭಿನಂದನೆ ಸಲ್ಲಿಸಿದರು.

ಬೇಳೂರು ಗೋಪಾಲಕೃಷ್ಣ ಅವರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಬೇಳೂರು ಅವರು ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ನಿನ್ನೆ ಸ್ಪಷ್ಟಪಡಿಸಿದ್ದಾರೆ. ಸ್ಥಾನ ಸಿಗದಿದ್ದಾಗ ಎಲ್ಲರೂ ಅದೇ ರೀತಿ ಹೇಳುವುದು ಸಹಜ. ಹೈಕಮಾಂಡ್ ಎಲ್ಲವನ್ನೂ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತದೆ ಎಂದರು.

ಮಧು ಬಂಗಾರಪ್ಪ ಪ್ರವಾಸ ಆ. ೭ರಿಂದ :

ಮಧು ಬಂಗಾರಪ್ಪನವರು ಈ ತಿಂಗಳ 7 ರಿಂದ 11 ರವರೆಗೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. 7 ರಂದು ಸೊರಬ, 8 ರಂದು ಶಿವಮೊಗ್ಗ ಸೇರಿದಂತೆ ಇನ್ನಿತರ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ” ಎಂದು ಮಾಹಿತಿ ನೀಡಿದರು.

Author