ಶಿವಮೊಗ್ಗ,ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಫಲಿತಾಂಶ ಪ್ರಕಟಣೆ ಹಾಗೂ ಅಂಕಪಟ್ಟಿ ವಿತರಣೆಯಲ್ಲಿನ ವಿಳಂಬ ನೀತಿಯನ್ನು ವಿರೋಧಿಸಿ ಎನ್ಎಸ್ಯುಐ (NSUI) ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.
ಪ್ರತಿಭಟನಾಕಾರರು ಕುಲಪತಿಗಳ ಕಚೇರಿಯ ಮೇಲೆ ದಾಳಿ ನಡೆಸಿ, ಕಪ್ಪುಮಸಿ ಬಳಿದ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 40ಕ್ಕೂ ಹೆಚ್ಚು ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯದ ಎಸ್ಟೇಟ್ ವಿಭಾಗದ ಸಹಾಯಕ ಕುಲಸಚಿವ ಟಿ. ನಾಗರಾಜ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಸಂಖ್ಯೆ 93/2026ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್ ಸೇರಿದಂತೆ 15 ಪ್ರಮುಖ ನಾಯಕರು ಹಾಗೂ ಇತರ 30ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಬಿಎನ್ಎಸ್ (BNS) 2023ರ ವಿವಿಧ ಕಠಿಣ ಕಲಂಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ.
ಶೇ. 98ರಷ್ಟು ಸಮಸ್ಯೆ ಪರಿಹರಿಶಲಾಗಿದೆ: ಕುಲಸಚಿವ ಹೇಮಂತ್ ಸ್ಪಷ್ಟನೆ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿವಿ ಪ್ರಭಾರ ಕುಲಸಚಿವ ಹಾಗೂ ಜಿ.ಪಂ. ಸಿಇಒ ಹೇಮಂತ್ ಅವರು, ಪ್ರತಿಭಟನೆಯ ಹೆಸರಿನಲ್ಲಿ ನಡೆದ ದಾಂಧಲೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇದ್ದ ಸುಮಾರು 18,000 ತಾಂತ್ರಿಕ ಗೊಂದಲಗಳಲ್ಲಿ ಈಗಾಗಲೇ ಶೇ. 98ರಷ್ಟು ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ಕೇವಲ 1,500 ಅರ್ಜಿಗಳು ಬಾಕಿ ಇದ್ದು, ಮೇ ತಿಂಗಳೊಳಗೆ ಅವುಗಳನ್ನೂ ಪೂರ್ಣಗೊಳಿಸಲಾಗುವುದು, ಎಂದು ಅವರು ಮಾಹಿತಿ ನೀಡಿದ್ದಾರೆ .
ಅಂಕಪಟ್ಟಿ ವಿತರಣೆಯಲ್ಲಿ ಹೊಸ ನಿಯಮ:
ಡಿಜಿಟಲ್ ಇಂಡಿಯಾ ಯೋಜನೆಯಡಿ ಅಂಕಪಟ್ಟಿಗಳನ್ನು ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಕೆಪಿಎಸ್ಸಿ ಅಂತಹ ಪರೀಕ್ಷೆಗಳಿಗೆ ಭೌತಿಕ ಅಂಕಪಟ್ಟಿಯ ಅಗತ್ಯವಿರುವುದಿಲ್ಲ, ಕೇವಲ ಕೋಡ್ ನಮೂದಿಸಿದರೆ ಸಾಕಾಗುತ್ತದೆ ಎಂದು ವಿವರಿಸಿದ ಅವರು, ಯಾವುದೇ ರೀತಿಯ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಘಟಿಕೋತ್ಸವದ ಶುಲ್ಕವನ್ನು ಮುಂಚಿತವಾಗಿ ಪಡೆಯಲಾಗುತ್ತಿದೆಯೇ ಹೊರತು ಹೊಸ ಶುಲ್ಕ ವಿಧಿಸಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.ಸದ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

