Cockroach Janatha Party | ಜಿರಲೆಗಳ ತರಲೆ ಹಾವಳಿಗೆ ಬ್ರೇಕ್ ಹಾಕಲು ಈಗ ಕಾಫಿನಾಡಿನ ಮಲೆನಾಡಿಗರು ಸಜ್ಜು..!

ದೇಶ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಕ್ಕೆ ಯಾವಾಗ ಡಿಮ್ಯಾಂಡ್ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ ಎಂಬ ವಿಚಿತ್ರ ಹೆಸರಿನ ಟ್ರೆಂಡ್ ಸದ್ದು ಮಾಡುತ್ತಿದೆ. ಆದರೆ, ಈ ಜಿರಲೆಗಳ ಹಾವಳಿಗೆ ಬ್ರೇಕ್ ಹಾಕಲು ಈಗ ಕಾಫಿನಾಡಿನ ಮಲೆನಾಡಿಗರು ಸಜ್ಜಾಗಿದ್ದಾರೆ.

ನಮ್ಮ ದೇಶದಲ್ಲಿ ಈಗಾಗಲೇ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.ಕೇವಲ 5 ದಿನದಲ್ಲಿ 20 ಮಿಲಿಯನ್ ಗಿಂತ ಅಧಿಕ ಜನರು ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳು ಆಗಿದ್ದಾರೆ. ಈ ಜಿರಲೆ ಪಾರ್ಟಿಗೆ ಕೌಂಟರ್ ಕೊಡಲು ಚಿಕ್ಕಮಗಳೂರಿನಲ್ಲಿ ‘ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ’ ಉದಯಿಸಿದೆ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬುವವರು ಈ ವಿಭಿನ್ನ ‘ಹಿಟ್ ಪಾರ್ಟಿ’ಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗದೀಶ್ಚಂದ್ರ ಅವರೇ ಆಯ್ಕೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಿರಲೆ ಪಾರ್ಟಿಯ ಆರ್ಭಟ ಹೆಚ್ಚಾದ ಬೆನ್ನಲ್ಲೇ, ಅದನ್ನು ನಿಯಂತ್ರಿಸಲು ಜಿರಲೆ ನಾಶಕ ‘ಹಿಟ್’ ಮತ್ತು ‘ಲಕ್ಷ್ಮಣರೇಖೆ’ ಹೆಸರಿನಲ್ಲಿ ಈ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

ಈ ಹಿಟ್ ಪಾರ್ಟಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಈ ಪಾರ್ಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ‘ನಾವು ಜಿರಲೆಗಳಿಗೆ ಹೆದರುವುದಿಲ್ಲ, ಅವುಗಳನ್ನು ಮಟ್ಟಹಾಕಲು ನಮ್ಮ ಬಳಿ ಅಸ್ತ್ರಗಳಿವೆ’ ಎಂಬ ಸ್ಲೋಗನ್‌ಗಳು ವೈರಲ್ ಆಗುತ್ತಿವೆ.

ಜಿರಲೆಗಳು ಎಲ್ಲಿಯೇ ಕಾಣಿಸಿಕೊಂಡರೂ ಹಿಟ್ ಸ್ಪ್ರೇ ಅಥವಾ ಲಕ್ಷ್ಮಣರೇಖೆ ಬಳಸಿ ಅವುಗಳನ್ನು ಶಮನ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹಿಟ್ ಪಾರ್ಟಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

Author