ಶಿವಮೊಗ್ಗ ಸಮಯ ಪ್ರಜ್ಞೆ ಮತ್ತು ನಿಷ್ಟೆಯಿಂದ ಕರ್ತವ್ಯದಲ್ಲಿ ತೊಡಗಿದರೆ ಇಲಾಖೆಗೆ ಉತ್ತಮ ಹೆಸರು ಬರುವುದರೊಂದಿಗೆ ಪ್ರಶಂಸೆ, ಆತ್ಮತೃಪ್ತಿ ಲಭಿಸುತ್ತದೆ ಎಂದು ಪೂರ್ವ ಸಂಚಾರಿ ಪೊಲೀಸ್ ಠಾಣೆ ನಿವೃತ್ತ ಎ ಎಸ್ ಐ ರಾಜಕುಮಾರ ಹೇಳಿದರು.
ಗುರುವಾರ, ಇಂದು ಬೆಳಿಗ್ಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ದುಡಿಯುವ ಆರಕ್ಷಕ ಪಡೆಯ ಕರ್ತವ್ಯ ಸೇವೆ ನೆನೆಯುವ ದಿನ ಇದಾಗಿದೆ.
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕವನ್ನು ಏಪ್ರಿಲ್ 2 ರಂದು ಮತ್ತು ಕರ್ತವ್ಯ ಮಾಡುತ್ತಲೇ ನಿಧನ ಹೊಂದಿದವರನ್ನು ಸ್ಮರಿಸಲು ಅ.21 ರಂದು ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ಇವೆರೆಡು ವಿಶೇಷ ದಿನಗಳಾಗಿವೆ.
ಜಿಲ್ಲೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಶಾಂತಿ ಸ್ಥಾಪನೆಗೆ ಕೊಡುಗೆಯನ್ನಿತ್ತ ಪೊಲೀಸ್ ಪಡೆಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ದಕ್ಷತೆ, ಸಮಯ ಪ್ರಜ್ಞೆಯಿಂದ ದುಡಿದ ಪೊಲೀಸ್ ನೌಕರರ ಕುಂದುಕೊರತೆಗಳನ್ನು ಆಲಿಸಿ ಭದ್ರತೆಯನ್ನು ಒದಗಿಸುವಂತೆ ಇದೇ ವೇಳೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ ಮಾತನಾಡಿ, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗಾಗಿಯೇ ನಿವೃತ್ತ ಪೊಲೀಸ್ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ. ಇದರ ಪ್ರಯುಕ್ತವಾಗಿ ಈ ದಿನದಂದು ಪೊಲೀಸ್ ಸಾಂಕೇತಿಕ ಧ್ವಜಗಳನ್ನು ಪೊಲೀಸ್ ಅಧಿಕಾರಿಗಳಿಗೆ, ಆಹ್ವಾನಿತ ಉನ್ನತ ಅಧಿಕಾರಿಗಳಿಗೆ, ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹವಾಗಿ ಬಂದ ಹಣದಲ್ಲಿ ಶೇ. 50 ರಷ್ಟು ಹಣವನ್ನು ನಿವೃತ್ತ ಕ್ಷೇಮಾಭಿವೃದ್ದಿ ನಿಧಿಗೆ ಮತ್ತು ಶೇ.50 ರಷ್ಟನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುವುದು ಎಂದರು.
2025 ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ರೂ. 26,96,870 ಹಣವನ್ನು ಸಂಗ್ರಹಣೆ ಮಾಡಲಾಗಿದೆ. ಇದರಲ್ಲಿ ಶೇ.50 ರಷ್ಟನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮೆ ಮಾಡಲಾಗಿದೆ. ನಿವೃತ್ತ ಅಧಿಕಾರಿಗಳು ಮರಣ ಹೊಂದಿದಾಗ ಅವರ ಅಂತ್ಯ ಸಂಸ್ಕಾರ ನಿರ್ವಹಣೆಗಾಗಿ ಈ ಕಲ್ಯಾಣ ನಿಧಿಯಿಂದ ರೂ. 10 ಸಾವಿರ ಹಣವನ್ನು ನೀಡಲಾಗುತ್ತಿದೆ.
2025 ನೇ ಸಾಲಿನಲ್ಲಿ 17 ಜನ ಅಧಿಕಾರಿ/ಸಿಬ್ಬಂದಿಗಳಿಗೆ ರೂ. 1,70,000 ಹಣವನ್ನು ಅಂತ್ಯಸAಸ್ಕಾರಕ್ಕೆ ನೀಡಲಾಗಿದೆ. 2025-26 ನೇ ಸಾಲಿನಲ್ಲಿ ಒಟ್ಟು 93 ಜನ ನಿವೃತ್ತ ಅಧಿಕಾರಿ, ಸಿಬ್ಬಂದಿಗಳಿಗೆ ನಿವೃತ ಕಲ್ಯಾಣ ನಿಧಿನಿಯಿಂದ ರೂ.3,29,000 ಗಳನ್ನು ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಪಟ್ಟ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಹಾಗೂ 2013 ರಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದ ಪೂರ್ವ ಸಂಚಾರಿ ಪೊಲೀಸ್ ಠಾಣೆ ನಿವೃತ್ತ ಎ ಎಸ್ ಐ ರಾಜಕುಮಾರರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ, ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.



