ಶಿವಮೊಗ್ಗ | ಅಮೃತ ಲೈಫ್ ಲೈನ್ ವೈದ್ಯರ ಎಡವಟ್ಟಿಗೆ ಮಹಿಳ ರೋಗಿಯ ಜೀವನ್ಮರಣದ ಹೋರಾಟ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಮಹಿಳೆಯೊಬ್ಬರು ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಶಿವಮೊಗ್ಗದ ‘ಅಮೃತ ಲೈಫ್ ಲೈನ್ ‘ (Amrutha LifeLine) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಅನಸ್ತೇಶಿಯಾ ಓವರ್‌ಡೋಸ್‌ನಿಂದಾಗಿ ಮಹಿಳೆ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಆಯನೂರು ಗ್ರಾಮದ ನಿವಾಸಿ ದೇವಿ ಬಾಯಿ (45) ಎಂಬುವವರು ಹರ್ನಿಯಾ (Hernia) ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮಾರ್ಚ್ 11ರಂದು ಶಿವಮೊಗ್ಗದ ಅಮೃತ ಲೈಫ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು.

ಮಾರ್ಚ್ 12ರಂದು ವೈದ್ಯರು ಇವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೀಡಲಾದ ಅನಸ್ತೇಶಿಯಾ (ಮತ್ತು ಮದ್ದು) ಪ್ರಮಾಣ ಮಿತಿ ಮೀರಿದ್ದರಿಂದ ಮಾರ್ಚ್ 13ರಿಂದಲೇ ಮಹಿಳೆಯ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಂತಾಗಿದೆ.

ಶಸ್ತ್ರಚಿಕಿತ್ಸೆ ಮುಗಿದು ದಿನಗಳೇ ಕಳೆದರೂ ದೇವಿ ಬಾಯಿ ಅವರು ಪ್ರಜ್ಞಾವಸ್ಥೆಗೆ ಬಂದಿಲ್ಲ. ವೈದ್ಯರ ಯಡವಟ್ಟಿನಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಆಸ್ಪತ್ರೆಯ ವೈದ್ಯರ ಸಲಹೆಯಂತೆ ನಂತರ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ, ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಧನಂಜಯ್ ಎಂಬುವವರ ವಿರುದ್ಧ ಕುಟುಂಬಸ್ಥರು ಕಿಡಿಕಾರಿದ್ದಾರೆ. ‘ನಾನು ಮಾಡಿದ್ದೇ ಸರಿ’ ಎಂದು ವೈದ್ಯರು ವಾದಿಸುತ್ತಿದ್ದಾರೆ ಎಂದು ದೇವಿ ಬಾಯಿ ಅವರ ಅಳಿಯ ಕಾಂತರಾಜ್ ಮತ್ತು ಸಂಬಂಧಿ ಉಷಾ ನಾಯ್ಕ ದೂರಿದ್ದಾರೆ.

ಅಷ್ಟೇ ಅಲ್ಲದೆ, ಆಸ್ಪತ್ರೆಯ ಆಡಳಿತ ಮಂಡಳಿಯು ರೋಗಿಯ ಸಂಬಂಧಿಕರಿಗೆ ಬೆದರಿಕೆ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

‘ನೀವು ಬೇಕಾದರೆ ಪೊಲೀಸ್ ದೂರು ನೀಡಿ ಅಥವಾ ಕೋರ್ಟ್‌ಗೆ ಹೋಗಿ, ನಮಗೇನೂ ಆಗಲ್ಲ’ ಎಂದು ಆಸ್ಪತ್ರೆ ಮಂಡಳಿ ಉದ್ಧಟತನ ತೋರಿದೆ ಎಂದು ಗಾಯಾಳು ಮಹಿಳೆಯ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸಾಮಾನ್ಯ ಶಸ್ತ್ರಚಿಕಿತ್ಸೆಗೆಂದು ಬಂದ ಮಹಿಳೆಯ ಜೀವನವನ್ನು ವೈದ್ಯರು ಹಾಳು ಮಾಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯ ಧನಂಜಯ್ ಮತ್ತು ಅಮೃತ ಲೈಫ್ ಕೇರ್ ಆಸ್ಪತ್ರೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆದ ಮರುದಿನದ ವಿಡಿಯೋ ಮತ್ತು ವೈದ್ಯರೊಂದಿಗೆ ನಡೆದ ವಾಗ್ವಾದದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Author