ಶಿವಮೊಗ್ಗ, ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಶಾಲಾ ಬಾಲಕ ಸಂಕೇತ್ನ ಸಮಾಧಿಗೆ ಹಾನಿ ಮಾಡಲಾಗಿದೆ. ಫೆಬ್ರವರಿ 24ರಂದು ಊರಗಡೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆಯಾಗಿತ್ತು. ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್ನ ಅಂತ್ಯೆಕ್ರಿಯೆ ನೆರವೇರಿಸಲಾಗಿತ್ತು.
ಒಡೆದ ಸ್ಥಿತಿಯಲ್ಲಿ ಸಮಾಧಿ
ಸಂಕೇತ್ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೊ ಅಳವಡಿಸಲಾಗಿತ್ತು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್ನ ಪೋಷಕರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಕೇತ್ನ ತಂದೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಮಾಧಿಗೆ ಸಂಕೇತ್ನ ಫೋಟೊ ಅಳವಡಿಸಲಾಗಿತ್ತು. ಅದನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದು ಹಾಕಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಸಂಕೇತ್ನ ಸಾವಿನ ಬಳಿಕ ಮನೆಯಲ್ಲಿ ನೆಮ್ಮದಿ ಇಲ್ಲವಾಗಿದೆ. ಈಗ ಇಂತಹ ಘಟನೆ ನಡೆದಿರುವುದು ಮತ್ತಷ್ಟು ಆಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಟ್ಟೆ ಕಟ್ಟಿಸಿ ಗ್ರಾನೈಟ್ ಹಾಕಿಸಿದ್ದರು
ಹಿಂದೂ ರುದ್ರಭೂಮಿಯಲ್ಲಿ ಮಾರ್ಚ್ 26ರಂದು ಸಂಕೇತ್ ಸಮಾಧಿಗೆ ಕಟ್ಟೆ ಕಟ್ಟಿಸಲಾಗಿತ್ತು. ಕುಟುಂಬದವರು ಸುತ್ತಲು ಗ್ರಾನೈಟ್ ಕಲ್ಲು ಹಾಕಿಸಿದ್ದರು. ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಹಿಂಬದಿಯಲ್ಲಿ ಸಂಕೇತ್ನ ಫೋಟೊ ಇರಿಸಲಾಗಿತ್ತು. ಕುಟುಂಬದವರು ಪ್ರತಿ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತಿದ್ದರು ಎಂದು ಶಿವಕುಮಾರ್ ತಿಳಿಸಿದರು.
ಸಂಕೇತ್ಗೆ ಬುಧವಾರ ಅಂದರೆ ಪ್ರೀತಿ. ಆತ ಪ್ರತಿ ಬುಧವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಪೂಜೆ ಮಾಡುತ್ತಿದ್ದ. ಹಾಗಾಗಿ ಈ ಬುಧವಾರ ಸಮಾಧಿ ಸ್ಥಳಕ್ಕೆ ಕುಟುಂಬದವರೆಲ್ಲ ತೆರಳಿ ಪೂಜೆ ಸಲ್ಲಿಸುವ ಯೋಚನೆಯಲ್ಲಿದ್ದರು. ಆದರೆ ಮಂಗಳವಾರ ಸಂಜೆ ಸಮಾಧಿ ಒಡೆದ ವಿಷಯ ತಿಳಿದು ಬಂದಿದೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.



