ಶಿವಮೊಗ್ಗ | ಕೆಎಸ್’ಆರ್’ಟಿಸಿ ಬಸ್ ಅತಿವೇಗ, ಅಜಾಗರೂಕ ಚಾಲನೆಯಿಂದ ಅಪಘಾತ : ಆಟೋ, ಕಾರು ಚಾಲಕ ಗಂಭೀರ

ಶಿವಮೊಗ್ಗ

ಶಿವಮೊಗ್ಗ,ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್’ಆರ್’ಟಿಸಿ ಬಸ್‌’ವೊಂದು ವೇಗವಾಗಿ ಆಟೋಗೆ ಡಿಕ್ಕಿ ಹೊಡೆದು, ನಂತರ ಕಿಯಾ ಕಾರು ಹಾಗೂ ಶಾಲಾ ಬಸ್‌’ಗೆ ಡಿಕ್ಕಿ ಹೊಡೆದ ಘಟನೆ ಇಂದು ಸಂಭವಿಸಿದೆ.

ಘಟನೆಯಲ್ಲಿ ಆಟೋ ಚಾಲಕ ರಾಜು ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಎಡಗೈ, ಎಡಗಾಲು, ಸೊಂಟ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬಿಎಚ್ ರಸ್ತೆಯ ಅಶೋಕ ವೃತ್ತದಲ್ಲಿ ಕೆಂಪು ಸಿಗ್ನಲ್ ಇದ್ದುದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ವೇಳೆ ಎಎ ವೃತ್ತದ ಕಡೆಯಿಂದ ವೇಗವಾಗಿ ಬಂದ ಕೆಎಸ್‌’ಆರ್’ಟಿಸಿ ಬಸ್ ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಆಟೋವನ್ನು ತಳ್ಳಿಕೊಂಡು ಕಿಯಾ ಕಾರು, ನಂತರ ಶಾಲಾ ಬಸ್‌’ಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದ ಬಸ್ ಡಿಕ್ಕಿ ಹೊಡೆದು ಕಾರು ಹಾಗೂ ಬಸ್ ನಡುವೆ ಸಿಲುಕಿದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಿಯಾ ಕಾರು ಸಹ ಬಹಳಷ್ಟು ಹಾನಿಯಾಗಿದೆ. ನಂತರ ಮುಂದಿದ್ದ ಶಾಲಾ ಬಸ್‌’ಗೆ ಡಿಕ್ಕಿ ಹೊಡೆದಿದೆ.

ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿದ ಸಾರ್ವಜನಿಕರು, ಕಿಯಾ ಕಾರು ಚಾಲಕ ಸುದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಷರೀಫ್‌ ಹಾಗೂ ಕೆಎಸ್‌’ಆರ್’ಟಿಸಿ ಬಸ್ ಕಂಡಕ್ಟರ್ ಕರಿಬಸಪ್ಪ ಅವರು ಆಟೋದಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತೆಗೆದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಎಸ್’ಆರ್’ಟಿಸಿ ಬಸ್‌ ಚಾಲಕ ದೇವರಾಜ್ ಅವರ ಅತಿವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಘಟನೆಗೆ ಕಾರಣ ಎಂದು ವರದಿಯಾಗಿದೆ.

ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ಎಫ್‌ಐಆರ್ ದಾಖಲಾಗಿದೆ.

Author