ಭದ್ರಾವತಿ ವೃದ್ಧ ದಂಪತಿ ಕೊಲೆ ; 24 ಗಂಟೆಯೊಳಗೆ ಕೊಲೆ ರಹಸ್ಯ ಭೇದಿಸಿ, ಆರೋಪಿಯ ಹೆಡೆಮುರಿ ಕಟ್ಟಿದ್ದ ಹಳೇನಗರ ಪೊಲೀಸರು

ಶಿವಮೊಗ್ಗ

ಶಿವಮೊಗ್ಗ,ಇದ್ದಕ್ಕಿದ್ದಂತೆ ಮನೆಯಲ್ಲಿ ವೃದ್ಧ ದಂಪತಿ ನಿಗೂಢವಾಗಿ ಸಾವನ್ನಪ್ಪಿದ್ದ ಘಟನೆಯ ರಹಸ್ಯ ಬಯಲಾಗಿದೆ.ನಿನ್ನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮನೆಯೊಂದರಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದರು. ಇದೀಗ ದಂಪತಿ ಸಾವಿನ ಬಗ್ಗೆ ಆಘಾತಕಾರಿ ಮಾಹಿತಿ ಬಯಲಾಗಿದೆ.

ವೃದ್ಧ ದಂಪತಿಯ ಸಂಬಂಧಿ ವೈದ್ಯನೇ ಇಬ್ಬರನ್ನೂ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿಗೆ ಚಿಕಿತ್ಸೆ ನೆಪದಲ್ಲಿ ಹಣಕ್ಕಾಗಿ ಇಂಜಕ್ಷನ್ ಕೊಟ್ಟು ಸಾವಿಸಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಚಂದ್ರಪ್ಪ (80) ಹಾಗೂ ಪತ್ನಿ ಜಯಮ್ಮ (75) ಅವರನ್ನು ಡಾ.ಮಲ್ಲೇಶ್ ಎಂಬ ಸಂಬಂಧಿಯೇ ಕೊಲೆ ಮಾಡಿದ್ದಾನೆ. ಪಕ್ಕಾ ಪ್ಲಾನ್ ಮಾಡಿ ಇಂಜಕ್ಷನ್ ನೀಡುವ ಮೂಲಕ ದಂಪತಿಯನ್ನು ಸಾಯಿಸಿದ್ದಾನೆ. ಬಳಿಕ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ.

ಚಂದ್ರಪ್ಪನ ತಮ್ಮನ ಮಗನಾಗಿದ್ದ ಡಾ.ಮಲ್ಲೇಶ್ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಹಣಕ್ಕಾಗಿ ದೊಡ್ಡಪ್ಪ ಚಂದ್ರಪ್ಪನನ್ನು ಕೇಳಿದ್ದ. ನಮ್ಮ ಬಳಿ ಹಣವಿಲ್ಲ ಎಂದಿದಾರೆ. ದೊಡ್ಡಪ್ಪ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ದಂಪತಿಯನ್ನೇ ಇಂಜಕ್ಷನ್ ಕೊಟ್ಟು ಮುಗಿಸಿ, ಮನೆಯಲ್ಲಿದ್ದ ಹಣ ದೋಚಿ ಎಸ್ಕೇಪ್ ಆಗಿದ್ದ.

ಸದ್ಯ ತನಿಖೆ ನಡೆಸಿದ ಭದ್ರಾವತಿ ಹಳೆ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಶೇಷವೆಂದರೆ 24 ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಅವರು ತಮ್ಮ ತಂಡದ ಕರ್ತವ್ಯ ಶ್ಲಾಘಿಸಿದ್ದಾರೆ ಹಾಗೂ ನಗದು ಬಹುಮಾನ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Author