ಹೊಸನಗರ, ತಾಲೂಕಿನ ಮಾವಿನಕಟ್ಟೆ ಸಮೀಪ ಶುಕ್ರವಾರ ತಡ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಮಾವಿನಕಟ್ಟೆ ಗ್ರಾಮದ ಚೇತನ್ ಮೊಗವೀರ ಎಂದು ಗುರುತಿಸಲಾಗಿದೆ.
ಉಡುಪಿ ನಗರದ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಚೇತನ್ ಇಂದು ರಾತ್ರಿ ಸುಮಾರು 8.45ರಿಂದ 9.00 ಗಂಟೆ ನಡುವಿನ ವೇಳೆಯಲ್ಲಿ ಹೊಸನಗರದಿಂದ ತಮ್ಮ ಊರಾದ ಮಾವಿನಕಟ್ಟೆಗೆ ಎನ್ಎಸ್ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾವಿನಕಟ್ಟೆ ಬಳಿ ರಸ್ತೆ ಮಧ್ಯಭಾಗದಲ್ಲಿ ಗುಂಡಿ ತೆಗೆಯಲಾಗಿದ್ದು, ಮೋರಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಜಲ್ಲಿ ಹಾಗೂ ಮರಳನ್ನು ಹಾಕಲಾಗಿತ್ತು. ಆದರೆ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳು ಅಥವಾ ಎಚ್ಚರಿಕೆ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಪರಿಣಾಮ ಚೇತನ್ ಮೊಗವೀರ ಅವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿನ್ನೆ ತಮ್ಮ ಊರಾದ ಮಾವಿನಕಟ್ಟೆಗೆ ಆಗಮಿಸಿದ್ದ ಚೇತನ್ ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರಿಗೆ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದಾರೆ, ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



