ಚಿಕ್ಕಬಳ್ಳಾಪುರ, ಊಟಕ್ಕೆ ನಿಲ್ಲಿಸಿದ್ದ ವೇಳೆ ಬೆಂಗಳೂರು-ಹೈದರಾಬಾದ್ KSRTC ಎಸಿ ಸ್ಲೀಪರ್ ಬಸ್ನಲ್ಲಿದ್ದ 55 ಲಕ್ಷ ರೂ. ಹಣ ಕಳವು ಪ್ರಕರಣ ಸಂಬಂಧ ಹುಡಿಬಂಡೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದು, ಕಳುವಾಗಿದ್ದ ಹಣವನ್ನ ಬಂಧಿತನಿಂದ ಜಪ್ತಿ ಮಾಡಲಾಗಿದೆ. ಎಲ್ಲ ಆರೋಪಿಗಳು ಮಧ್ಯಪ್ರದೇಶ ಮೂಲದವರು ಎಂಬುದು ತನಿಳೆ ವೇಳೆ ಬಯಲಾಗಿದೆ.
ಪ್ರಕರಣ ಸಂಬಂಧ ಮಧ್ಯ ಪ್ರದೇಶದಲ್ಲಿ ಆರೋಪಿ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ಕದ್ದ ಹಣವನ್ನೂ ರಿಕವರಿ ಮಾಡಲಾಗಿದೆ. ಈತನಿಗೆ ಕೃತ್ಯವೆಸಗಲು ಸಹಕಾರ ನೀಡಿದ್ದ ಮಧ್ಯ ಪ್ರದೇಶದ ಮೂಲದವರಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ಪರಾರಿಯಾಗಿದ್ದಾರೆ. ಬಸ್ನಲ್ಲಿ ಪ್ರಯಾಣಿಸುವವರ ಬೆಲೆಬಾಳುವ ವಸ್ತು, ಚಿನ್ನಾಭರಣ, ಹಣ ಕಳ್ಳತನ ಮಾಡುವುದೇ ಈ ಗ್ಯಾಂಗ್ ಕಾಯಕವಾಗಿತ್ತು.
ಕಳ್ಳತನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬಾಡಿಗೆಗೆ ಇವರು ರೂಮ್ ಕೂಡ ಪಡೆದಿದ್ದರು. ಕದ್ದ ಹಣವನ್ನು ಇಲ್ಲೇ ಇಟ್ಟು ಆರೋಪಿಗಳು ಮಧ್ಯಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಹಣ ಸೇಫ್ ಆಗಿತ್ತು ಎನ್ನಲಾಗಿದೆ.
ಇದೇ ತಿಂಗಳ 8ನೇ ತಾರೀಕು ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದ KSRTC ಎಸಿ ಸ್ಲೀಪರ್ ಐಷಾರಾಮಿ ಬಸ್ನಲ್ಲಿ ವೆಂಕಟೇಶ್ವರ್ ರಾವ್ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟಲ್ವೊಂದರಲ್ಲಿ ಪ್ರಯಾಣಿಕರಿಗೆ ಊಟ ಮಾಡಲು ಚಾಲಕ ಬಸ್ ನಿಲ್ಲಿಸಿದ್ದ. ಈ ವೇಳೆ ವೆಂಕಟೇಶ್ವರ್ ರಾವ್ ತಮ್ಮ ಬಳಿ ಇದ್ದ ಹಣದ ಬ್ಯಾಗ್ನ ಬಸ್ನಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದರು. ಆದರೆ ಹಿಂದಿರುಗಿ ಬಂದು ನೋಡುವಾಗ ಸೀಟ್ನಲ್ಲಿದ್ದ ಬ್ಯಾಗ್ ನಾಪತ್ತೆಯಾಗಿತ್ತು.
ಕಾರಲ್ಲಿ ಬಂದ ವ್ಯಕ್ತಿ ಸೀದಾ ಬಸ್ಗೆ ನುಗ್ಗಿ ಬ್ಯಾಗ್ ತೆಗೆದುಕೊಂಡು ಹೋಗಿರುವ ಬಗ್ಗೆ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದರು. ಘಟನೆ ಬಗ್ಗೆ ವೆಂಕಟೇಶ್ವರ್ ರಾವ್ ಅವರ ದೂರಿನ ಬೆನ್ನಲ್ಲೇ ಪೊಲೀಸರು ತನಿಖೆಗೆ ಇಳಿದಿದ್ದರು.



