ಶಿವಮೊಗ್ಗ, ಮುಂಬೈ ವಿಮಾನ ನಿಲ್ದಾಣದ ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ, ಬೆಲೆಬಾಳುವ ಗಿಫ್ಟ್ ಬಂದಿದೆ ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ಶ್ರೀರಾಮಪುರ ನಿವಾಸಿಯಾದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 2,35,000 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆನೀತು ಎಂಬ ಹೆಸರಿನಲ್ಲಿ ದೂರುದಾರ ಮಹಿಳೆಗೆ ಕರೆ ಮಾಡಿದ ವ್ಯಕ್ತಿಗಳು, ನಿಮ್ಮ ಹೆಸರಿನಲ್ಲಿ ಬೆಲೆಬಾಳುವ ಉಡುಗೊರೆ ಬಂದಿದೆ ಎಂದು ಹೇಳಿ, ಅವರ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.
ತದನಂತರ ತಾವು ಮುಂಬೈ ಏರ್ಪೋರ್ಟ್ ಕಸ್ಟಮರ್ ಕೇರ್ನಿಂದ ಮಾತನಾಡುತ್ತಿರುವುದಾಗಿ ನಂಬಿಸಿದ ವಂಚಕರು, ಪಾರ್ಸಲ್ ಬಂದಿರುವುದು ನಿಜ ಆದರೆ ಅದನ್ನು ಬಿಡಿಸಿಕೊಳ್ಳಲು ಕಸ್ಟಮ್ಸ್ ಸುಂಕ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಬೇಕು ಎಂದು ನಂಬಿಸಿದ್ದಾರೆ.
ವಂಚಕರ ಮಾತನ್ನು ನಂಬಿದ ಮಹಿಳೆಯು, ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಕಳೆದ ಡಿಸೆಂಬರ್ 10 ರಿಂದ ಡಿಸೆಂಬರ್ 12 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 2,35,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರವೂ ಪಾರ್ಸಲ್ ಬಾರದೇ ಇದ್ದಾಗ ಮತ್ತು ಕರೆ ಮಾಡಿದವರು ಸಂಪರ್ಕಕ್ಕೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಗೊತ್ತಾಗಿದೆ.
ತಮಗೆ ವಂಚಿಸಿದವರನ್ನು ಪತ್ತೆ ಹಚ್ಚಿ, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಬೇಕೆಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,



