ಬೆಂಗಳೂರು | ನಾಲ್ಕು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ..!

ಕ್ರೈಂ

ಬೆಂಗಳೂರು,ವಾಜರಹಳ್ಳಿಯ ಬಿಸಿಸಿಎಚ್‌ಎಸ್‌ ಲೇಔಟ್‌ನ ಮನೆಯಲ್ಲಿ ನಾಲ್ಕು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ತಾಯಿ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಮಂಗಳವಾರ ಮಧ್ಯಾಹ್ನ ನಡೆದಿದೆ. ‌

ಕೃತ್ಯ ಎಸಗಿದ ಉಮಾದೇವಿ (44) ಅವರ ಪತಿ ರಾಮಲಿಂಗಪ್ಪ ಅವರು ನೀಡಿದ ದೂರು ಆಧರಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಮಲಿಂಗಪ್ಪ–ಉಮಾದೇವಿ 2002ರಲ್ಲಿ ಮದುವೆ ಆಗಿದ್ದರು. ರಾಮಲಿಂಗಪ್ಪ ಅವರು ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೃತಕ ಗರ್ಭಧಾರಣೆ (ಐವಿಎಫ್‌) ಚಿಕಿತ್ಸೆ ಮೂಲಕ, 2026ರ ಮೇ 5ರಂದು ಉಮಾದೇವಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು.

ಒಂದೂವರೆ ತಿಂಗಳಿನಿಂದ ಉಮಾದೇವಿ ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದರು. ಆಶ್ರಮಕ್ಕೆ ಸೇರಿಸುವಂತೆಯೂ ಹೇಳುತ್ತಿದ್ದರು. ಅಸಹಜವಾಗಿ ವರ್ತಿಸುತ್ತಿದ್ದರು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿತ್ತು.ಹೆರಿಗೆಯ ನಂತರದ ಹಾರ್ಮೋನ್ ಅಸಮತೋಲನದಿಂದ ಈ ರೀತಿಯ ವರ್ತನೆ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದರು.

ಮಂಗಳವಾರ ಮನೆಗೆ ಹೋಗಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದವು. ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ ಉಮಾದೇವಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರಾಮಲಿಂಗಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ದೂರಿನ ಪ್ರಕಾರ, ರಾಮಲಿಂಗಪ್ಪ ಮಧ್ಯಾಹ್ನ ಮನೆಗೆ ಮರಳಿದಾಗ ಅವರ ಪತ್ನಿ ಕೋಣೆಯೊಳಗೆ ಬೀಗ ಹಾಕಿಕೊಂಡಿರುವುದು ಕಂಡುಬಂದಿದೆ.

ಬಾಗಿಲು ತೆರೆದ ನಂತರ, ಉಮಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

Author