ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ನೀಡುವ ಪ್ರಸ್ತುತ ಕಾನೂನಿನ ಬಗ್ಗೆ ಸಿರಿ ಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಸ್ತಿ ಹಂಚಿಕೆಯ ವಿಚಾರವಾಗಿ ಕುಟುಂಬಗಳಲ್ಲಿ ಬಿರುಕು ಮೂಡುತ್ತಿದ್ದು, ಈ ಕಾನೂನನ್ನು ಮರುಪರಿಶೀಲಿಸಬೇಕು ಅಥವಾ ರದ್ದುಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಹಿನ್ನೆಲೆಯನ್ನು ವಿವರಿಸಿದ ಶ್ರೀಗಳು, ಹೆಣ್ಣುಮಕ್ಕಳ ಮದುವೆಗಾಗಿ ತಂದೆ-ತಾಯಿ ಮತ್ತು ಸಹೋದರರು ಸಾಕಷ್ಟು ಕಷ್ಟಪಡುತ್ತಾರೆ. ಸಾಲಸೋಲ ಮಾಡಿಯೋ ಅಥವಾ ಆಸ್ತಿಯನ್ನು ಮಾರಾಟ ಮಾಡಿಯೋ ಅದ್ಧೂರಿಯಾಗಿ ವಿವಾಹ ನೆರವೇರಿಸಿರುತ್ತಾರೆ. ಇಷ್ಟೆಲ್ಲಾ ಆದ ಮೇಲೂ ಸಹೋದರಿಯರು ಉಳಿದಿರುವ ಆಸ್ತಿಯಲ್ಲಿ ಮತ್ತೆ ಪಾಲು ಕೇಳುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.
ಆಸ್ತಿ ವಿಚಾರವಾಗಿ ನಡೆಯುತ್ತಿರುವ ಹಗ್ಗಜಗ್ಗಾಟದಿಂದಾಗಿ ರಕ್ತ ಸಂಬಂಧಗಳು ಹಾಳಾಗುತ್ತಿವೆ. ಕುಟುಂಬಗಳು ಒಡೆದು ಹೋಗುತ್ತಿರುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿದೆ. ಹೀಗಾಗಿ, ಜನಪ್ರತಿನಿಧಿಗಳು ಮತ್ತು ಸರ್ಕಾರವು ಈ ಕಾನೂನಿನ ಸಾಧಕ-ಬಾಧಕಗಳನ್ನು ಚರ್ಚಿಸಿ, ಸಂಬಂಧಗಳನ್ನು ಕೆಡಿಸುವ ಇಂತಹ ನಿಯಮಗಳನ್ನು ಹಿಂಪಡೆಯಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.
ಕಾನೂನುಗಳು ಯಾವಾಗಲೂ ಜನರ ಹಿತವನ್ನು ಕಾಯುವಂತಿರಬೇಕು ಮತ್ತು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಆದರೆ, ಪ್ರಸ್ತುತ ಇರುವ ಆಸ್ತಿ ಹಂಚಿಕೆ ಕಾನೂನು ಜನಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಈ ಕಾನೂನನ್ನು ತೆಗೆದುಹಾಕುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಅವರು ಒತ್ತಾಯಿಸಿದರು.

