ತರೀಕೆರೆ ತಾಲೂಕು ಅಜ್ಜಂಪುರ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಗಂಭೀರವಾಗಿ ಗಾಯಗೊಂಡರು. ಅವರ ಮೇಲೆ ಎತ್ತಿನಗಾಡಿ ಹರಿದಿದ್ದರಿಂದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಶಿವಮೊಗ್ಗ ಎಸ್ಪಿ ನಿಖಿಲ್ ಬಿ ರವರು ಆಸ್ಪತ್ರೆಗೆ ತೆರಳಿ ಸಹೋದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಈ ಅವಘಡ ಸಂಭವಿಸಿದೆ.
ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಲಂಕೃತ ಎತ್ತಿನಗಾಡಿಗಳಲ್ಲಿ ಆಗಮಿಸುತ್ತಿದ್ದರು.
ಈ ವೇಳೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸ್ತಿದ್ದ ಅಜ್ಜಂಪುರ ವೃತ್ತ ನಿರೀಕ್ಷಕ (ಸಿಪಿಐ) ವೀರೇಂದ್ರ ಅವರ ಮೇಲೆ ಎತ್ತಿನಗಾಡಿ ಹರಿದಿದೆ. ಗಮನ ಬೇರೆಡೆಗೆ ಇದ್ದ ಹೊತ್ತಿನಲ್ಲಿ ಹಿಂದಿನಿಂದ ವೇಗವಾಗಿ ಬಂದ ಎತ್ತಿನಗಾಡಿಯನ್ನು ಅಧಿಕಾರಿ ವೀರೇಂದ್ರರವರು ಗಮನಿಸಿದರಾದರೂ ಸಹ ಅಷ್ಟರಲ್ಲಿ ಎತ್ತಿನ ಗಾಡಿ ಅವರ ಮೇಲೆ ಹರಿದಿದೆ.
ವೀರೇದ್ರರವರು ಪಕ್ಕಕ್ಕೆ ಸರಿಯಲು ಯತ್ನಿಸುವಷ್ಟರಲ್ಲೇ ಗಾಡಿಯ ಚಕ್ರ ಅವರ ಮೇಲೆ ಹರಿದಿದೆ. ಟೈರ್ ಗಾಡಿಯಾಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣವೇ ಗಾಯಗೊಂಡ ಇನ್ಸ್ಪೆಕ್ಟರ್ ವೀರೇಂದ್ರ ಅವರನ್ನು ಸಹದ್ಯೋಗಿಗಳು ಮತ್ತು ಸ್ಥಳೀಯರು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.





