ಶಿವಮೊಗ್ಗ, ನಗರದ ಕುವೆಂಪು ರಸ್ತೆಯಲ್ಲಿ ನಂಜಪ್ಪ ಆಸ್ಪತ್ರೆ ಎದುರಿಗಿರುವ ಮರದಿಂದ ದ್ರವ ರೂಪದ ಅಂಟು ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿದ್ದಾರೆ. ಕಳೆದ ರಾತ್ರಿ ಸುರಿದ ಮಳೆಯ ನಂತರ ಘಟನೆ ಸಂಭವಿಸಿದೆ.ಮಳೆ ನಿಲ್ಲುತ್ತಿದ್ದಂತೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಐದಾರು ಬೈಕು ಜಾರಿ ಬಿದ್ದಿವೆ. ವಾಹನ ಸವಾರರು ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಅಂಗಡಿಯವರು ಗಾಯಾಳುಗಳಿಗೆ ನೆರವಾಗಿದ್ದು, ಕೂಡಲೆ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆ ಪೊಲೀಸರು ರಸ್ತೆಯ ಎರಡು ಬದಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ನಿಧಾನವಾಗಿ ಚಲಿಸುವಂತೆ ಸೂಚಿಸಿದರು.
ಇನ್ಸ್ಪೆಕ್ಟರ್ ದೇವರಾಜ್ ಅವರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿ, ವಾಟರ್ ಟ್ಯಾಂಕರ್ ತರಿಸಿ ನೀರಿ ಹಾಯಿಸಿ ಸ್ವಚ್ಛತೆ ಕಾರ್ಯಕ್ಕೆ ನಡೆಸಿದರು. ಇದರಿಂದ ಸುಗಮ ಸಂಚಾರಕ್ಕೆ ಅನುವಾಯಿತು.
ಮರದಿಂದ ದ್ರವ ರೂಪದ ಅಂಟು ಬಿದ್ದು ವಾಹನ ಸವಾರರು ಜಾರಿ ಬೀಳುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಬೆಳ್ಳಂಬೆಳಗ್ಗೆ ಹಲವು ವಾಹನಗಳು ಇದೇ ರೀತಿ ಜಾರಿ ಬಿದ್ದು ಸವಾರರು ಗಾಯಗೊಂಡಿದ್ದರು.



