ಶಿವಮೊಗ್ಗ | ಹಿಂದಿ ವಿಷಯಕ್ಕೆ ಗ್ರೇಡ್​​ ಪದ್ಧತಿ ಬೇಡ, ಅಂಕಗಳೇ ಇರಲಿ ; ಶಿಕ್ಷಕರ ಸಂಘದ ಮನವಿ

ಶಿವಮೊಗ್ಗ

ಶಿವಮೊಗ್ಗ,10ನೇ ತರಗತಿಯಲ್ಲಿ ಹಿಂದಿ ಭಾಷಾ ವಿಷಯಕ್ಕೆ ಅಂಕಗಳ ಬದಲಾಗಿ ಕೇವಲ ‘ಗ್ರೇಡ್’ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯ ಸದಸ್ಯರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಈ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಇರುವ ಗಂಭೀರತೆ ಕಡಿಮೆಯಾಗಿ, ಭಾಷಾ ಕಲಿಕೆಯ ಗುಣಮಟ್ಟ ಕುಸಿಯುವ ಭೀತಿ ಎದುರಾಗಿದೆ. ಪ್ರಥಮ ಮತ್ತು ದ್ವಿತೀಯ ಭಾಷೆಗಳಂತೆಯೇ ತೃತೀಯ ಭಾಷೆಗೂ ಅಂಕಗಳ ಮೌಲ್ಯಮಾಪನ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಸಮಾನ ಆದ್ಯತೆ ನೀಡಲು ಸಾಧ್ಯ ಎಂದು ಸಂಘ ಅಭಿಪ್ರಾಯಪಟ್ಟಿದೆ.

ರಾಷ್ಟ್ರ ಮಟ್ಟದ ಸಂಪರ್ಕ ಭಾಷೆಯಾಗಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತಿದೆ. ಒಂದು ವೇಳೆ ವಿಷಯದ ಮಹತ್ವ ಕಡಿಮೆಯಾದಲ್ಲಿ, ಮುಂದಿನ ದಿನಗಳಲ್ಲಿ ಶಿಕ್ಷಕರ ಹುದ್ದೆಗಳ ಕಡಿತ ಅಥವಾ ಭವಿಷ್ಯದ ನೇಮಕಾತಿಗಳ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆದು, ಮೊದಲಿನಂತೆಯೇ ಅಂಕ ಆಧಾರಿತ ಮೌಲ್ಯಮಾಪನ ಪದ್ಧತಿಯನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

Author