ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಏ.5 ಮತ್ತು 6 ರಂದು ಕೈಗೊಂಡಿರುವ ಪಾದಯಾತ್ರೆಯಿಂದ ಯಾವುದೇ ಪ್ರತಿಫಲ ನಿರೀಕ್ಷೆ ಸಾಧ್ಯವಿಲ್ಲ. ಹೊಸನಗರ ಪಟ್ಟಣದ ತಾಲ್ಲೂಕಿನ ಬಹುದೊಡ್ಡ ಸಮಸ್ಯೆಯಾದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು 110.ಕೆ.ವಿ ತರಲು ಹೋರಾಟ ನಡೆಸಿ ಎಂದು ಜನಹಿತ ಹೋರಾಟ ಎಂದು ಜನಹಿತರಂಗದ ರಾಜ್ಯ ಸಂಚಾಲಕ ವಾಟಗೋಡು ಸುರೇಶ್ ಹೇಳಿದ್ದಾರೆ.
ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪ್ರಸ್ತುತ ವಿಧಾನಸಭಾ ಕ್ಷೇತ್ರ ಪುನರ್ವಿಂಗಡಣೆ ಮಾಡುವ ಪ್ರಸ್ತಾವನೆಯೇ ಇಲ್ಲ. ಕೇಂದ್ರದಿಂದ ಅಧಿಸೂಚನೆಯೇ ಆಗದಿರುವಾಗ ಪಾದಯಾತ್ರೆ, ಹೋರಾಟ ಮಾಡಿ ಉಪಯೋಗವಿಲ್ಲ.
ಜನರ ಹಕ್ಕೊತ್ತಾಯದ ಮನವಿಯನ್ನು ಯಾರಿಗೆ ಸಲ್ಲಿಸುವುದು ಎನ್ನುವ ಪ್ರಶ್ನೆಗೆ ಮೊದಲು ಉತ್ತರ ಬೇಕಿದೆ ಎಂದರು.2004ರಿಂದ 2008ರ ವರೆಗೆ ಸಾಕಷ್ಟು ಹೋರಾಟ ನಡೆಸಿ, ಅಂದಿನ ಆಯೋಗದ ಮುಂದೆ ವಾದ ಮಂಡಿಸಿದರೂ ಪ್ರಯೋಜನವಾಗಿಲ್ಲ.
ಅಂದು ಮುಂದಾಳತ್ವ ವಹಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಆಪಾದಿಸಿದರು.ಸದ್ಯ ಎರಡು ರಾಷ್ಟ್ರೀಯ ಪಕ್ಷಗಳೂ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಹಾಗೂ ಪರಸ್ಪರ ವಿರೋಧ ಪಕ್ಷಗಳಾಗಿವೆ. ಸರಕಾರದ ಹಂತದಲ್ಲಿ ಆಗಬೇಕಿರುವ ಕ್ಷೇತ್ರ ಮರುವಿಂಗಡಣೆಗೆ ಸರಕಾರದ ಮಟ್ಟದಲ್ಲಿ ಒತ್ತಡ ಹೇರಬೇಕಾಗಿರುವ ರಾಜಕೀಯ ಮುಖಂಡರು ಅದನ್ನು ಬಿಟ್ಟು ಇಲ್ಲಿ ಜನಸಾಮಾನ್ಯರ ದಿಕ್ಕುತಪ್ಪಿಸಿ ಪಾದಯಾತ್ರೆ ಮಾಡುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು..?
ಹೊಸನಗರ ಕ್ಷೇತ್ರ ಇಲ್ಲದ ಕಾರಣಕ್ಕೆ ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಅದು ನಿಜವಾಗಿದ್ದಲ್ಲಿ, ಇದು ಇಬ್ಬರೂ ಶಾಸಕರ ವೈಫಲ್ಯ ಎನ್ನಬಹುದು. ಎರಡೂ ಪಕ್ಷದ ನಾಯಕರೂ ಇದಕ್ಕೆ ಹೊಣೆ ಹೊತ್ತು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ.
ನೈಜ ಕಾಳಜಿಯಿಂದ ಹೋರಾಟ ನಡೆಸುವುದಾದರೆ, ಹೋರಾಟದ ಮುಂದಾಳತ್ವ ವಹಿಸಿರುವ ಮುಖಂಡರು ತಮ್ಮ ಪಕ್ಷಗಳ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಹೋರಾಟ ನಡೆಸಲಿ ಎಂದು ಅವರು ಸವಾಲು ಹಾಕಿದರು.



