ಶಿವಮೊಗ್ಗದ ಊರುಗಡೂರಿನಲ್ಲಿ ನಡೆದ ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣವನ್ನು ಎನ್.ಐ.ಎ ತನಿಖೆಗೆ ಒಪ್ಪಿಸಬೇಕು ಎಂದು ಶಾಸಕಎಸ್.ಎನ್. ಚನ್ನಬಸಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಕ್ರಿಮಿನಲ್ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿರುವ ಹಿಂದೆ ದೊಡ್ಡ ಸಂಚಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗಾಂಜಾ ಸೇವನೆಯ ಪ್ರಮಾಣ ಶೇ. 15 ರಷ್ಟು ಏರಿಕೆಯಾಗಿದೆ. ವಿಶೇಷವಾಗಿ ಮುಸಲ್ಮಾನ್ ಸಮಾಜದ ಅಪ್ರಾಪ್ತ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗಿ ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿದ್ದಾರೆ.
ಬಾಲಪರಾಧಿಗಳಲ್ಲಿ ಶೇ. 10 ರಷ್ಟು ಮಕ್ಕಳು ಎಸ್.ಎಸ್.ಎಲ್.ಸಿ ಗಿಂತ ಕಡಿಮೆ ವ್ಯಾಸಂಗ ಮಾಡುತ್ತಿರುವವರಾಗಿದ್ದು, ಇವರನ್ನು ಬಳಸಿಕೊಂಡು ಕೆಲವು ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಮುಸಲ್ಮಾನ್ ಸಮಾಜವೇ ಇಂದು ಈ ಅಪ್ರಾಪ್ತ ಯುವಕರ ವಿರುದ್ಧ ತಿರುಗಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಅವರು ವಿವರಿಸಿದರು.
ಕೊಲೆ ಮಾಡಿದರೂ ಅಪ್ರಾಪ್ತ ಎಂಬ ಕಾರಣಕ್ಕೆ ಆರೋಪಿಗಳನ್ನು ಸುಲಭವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ಹಿಂದೆ ಶಿವಮೊಗ್ಗದಲ್ಲಿ ಪಿ.ಎಫ್.ಐ ನಿಷೇಧವಾಗಿದ್ದರೂ, ಅದರ ಚಟುವಟಿಕೆಗಳು ತೆರೆಯ ಮರೆಯಲ್ಲಿ ನಡೆಯುತ್ತಿವೆ. ಹಿಂದೂ ಮುಖಂಡರ ಹತ್ಯೆ ಮತ್ತು ಕಲ್ಲು ತೂರಾಟದಂತಹ ಪ್ರಕರಣಗಳಲ್ಲಿ ಅಪ್ರಾಪ್ತರನ್ನು ಕೋಮು ಪ್ರಚೋದನೆ ನೀಡಿ ಬಳಸಿಕೊಳ್ಳುವವರ ವಿರುದ್ಧ ಕಠಿಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಜೆಟ್ ಕುರಿತು ಮಾತನಾಡಿದ ಚನ್ನಬಸಪ್ಪ, ಈ ಸರ್ಕಾರದ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆಯಿಲ್ಲ. ನಿರೀಕ್ಷೆ ಇಟ್ಟುಕೊಂಡು ನಿರಾಸೆಗೊಳ್ಳುವ ಬದಲು ಸುಮ್ಮನಿರುವುದೇ ಲೇಸು. ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗಕ್ಕೆ ಬಂದಾಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ 2 ಕೋಟಿ ರೂ. ಕೇಳಬೇಕು ಅಂದುಕೊಂಡಿದ್ದೆವು, ಆದರೆ ಅವರ ಧೋರಣೆ ನೋಡಿದರೆ ಮನವಿ ಸಲ್ಲಿಸಲು ಮನಸ್ಸು ಬರಲಿಲ್ಲ ಎಂದು ವ್ಯಂಗ್ಯವಾಡಿದರು.



