ಮಾಚೇನಹಳ್ಳಿ ಬಳಿ ಅಂಡರ್ ಪಾಸ್ ಗೋಡೆ ಕುಸಿತ ; ಶಿವಮೊಗ್ಗ-ಭದ್ರಾವತಿ ರಸ್ತೆ ಸಂಚಾರದಲ್ಲಿ ಬದಲಾವಣೆ

ಶಿವಮೊಗ್ಗ

ಶಿವಮೊಗ್ಗ,ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಅಂಡರ್‌ಪಾಸ್‌ ಕಾಮಗಾರಿಯಲ್ಲಿ ಭೂಕುಸಿತವಾದ ಹಿನ್ನೆಲೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಇನ್ಮುಂದೆ ಭಾರೀ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು.

ಕಾಮಗಾರಿ ಪೂರ್ಣಗೊಳ್ಳುವವರೆಗೂ ಈ ಆದೇಶ ಚಾಲ್ತಿಯಲ್ಲಿರುತ್ತದೆ.ಶಿಮುಲ್‌ ಬಳಿ ಕಳೆದ ಮಳೆಗಾಲದಲ್ಲಿ ಭೂ ಕುಸಿತ ಆಗಿತ್ತು. ಈಗ ಆಯುರ್ವೇದ ಕಾಲೇಜು ಬಳಿ ಭೂಕುಸಿತ ಆಗಿತ್ತು. 4 ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ಕಾಮಗಾರಿ ಹಾಗೂ ಕಿರಿದಾದ ರಸ್ತೆಯಲ್ಲಿ ಪ್ರತಿದಿನ ಓಡಾಡುವುದು ತೊಂದರೆಯಾಗಿತ್ತು.

ಭೂಕುಸಿತದ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಿದ್ದಾರೆ.

ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ

ಶಿವಮೊಗ್ಗದಿಂದ ಭದ್ರಾವತಿಗೆ ಬರುವ ಭಾರೀ ವಾಹನಗಳು ಎಂಆರ್‌ಎಸ್‌ ಮೂಲಕ ಲಕ್ಕಿನ ಕೊಪ್ಪ ಸರ್ಕಲ್‌, ಹುಣಸೇಕಟ್ಟೆ ಜಂಕ್ಷನ್‌ ಮೂಲಕ ಹಿರಿಯೂರು, ಮಿಲ್ಟ್ರಿ ಕ್ಯಾಂಪ್‌ ಮೂಲಕ ಭದ್ರಾವತಿಗೆ ಹೋಗುವುದು.

ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಭಾರೀ ವಾಹನಗಳು ಮಿಲ್ಟ್ರಿ ಕ್ಯಾಂಪ್‌ ಹಿರಿಯೂರು, ಹುಣಸೇಕಟ್ಟೆ ಜಂಕ್ಷನ್‌, ಲಕ್ಕಿನಕೊಪ್ಪ ಸರ್ಕಲ್‌, ಎಂಆರ್‌ಎಸ್‌ ಮೂಲಕ ಶಿವಮೊಗ್ಗಕ್ಕೆ ತೆರಳುವುದು.

ಲಘು ವಾಹನಗಳಿಗೆ ಪರ್ಯಾಯ ಮಾರ್ಗ

ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಟೈಮ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಶಿವರಾಮನಗರ, ಮಾಚೇನಹಳ್ಳಿ ಕೈಗಾರಿಕಾ ವಲಯ, ಮಲವಗೊಪ್ಪ, ಎಂಆರ್‌ಎಸ್‌ ಮಾರ್ಗವಾಗಿ ಚಲಿಸುವುದು.

Author