ಶಿವಮೊಗ್ಗ, ಅಂತರ್ಜಾತಿಯ ಯುವತಿಯನ್ನ ಮದುವೆಯಾಗಿ ನಂತರ ಮನೆಗೆ ಕರೆದುಕೊಂಡು ಹೋಗದೆ ಜಾತಿ ನಿಂದನೆ ಮತ್ತು ಜೀವಬೆದರಿಕೆ ಹಾಕಿದ ವ್ಯಕ್ತಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 1,05,000/- ರೂ ದಂಡ ಶಿಕ್ಷೆಯನ್ನು ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿಕಾರಿಪುರ ತಾಲೂಕಿನ ಹಿತ್ತಲಗ್ರಾಮದ ಚಿದಾನಂದ ಎಂಬಾತ 2020 ನೇ ಸಾಲಿನಲ್ಲಿ ಬೈರನಕೊಪ್ಪದ ಯುವತಿಯನ್ನ ಶಿವಮೊಗ್ಗದ ಗುಡ್ಡೇಕಲ್ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ದಿನಾಂಕ:14-05-2020 ರಂದು ಗುಡ್ಡೇಕಲ್ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ, ಮದುವೆಯನ್ನು ದಿ:21-12-2020 ರಲ್ಲಿ ಸಬ್ರಿಜಿಸ್ಟರ್ ಕಛೇರಿಯಲ್ಲಿ ನೊಂದಾಯಿಸಲಾಗಿತ್ತು. ಚಿದಾನಂದನು ಈಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗದೇ ಆಕೆಯ ಊರು ಬೈರನಕೊಪ್ಪದ ಮನೆಯಲ್ಲಿಯೇ ಬಿಟ್ಟುಹೋಗಿದ್ದನು.
ನಂತರ ದಿನಾಂಕ:03-01-2023 ರಂದು ಈಕೆಯು ಬೈರನಕೊಪ್ಪದ ಮನೆಗೆ ಬಂದು ನೀನು ಕೆಳಜಾತಿಗೆ ಸೇರಿದ್ದು, ನಾನು ಮೇಲ್ಜಾತಿಗೆ ಸೇರಿದ್ದೇನೆ, ನಿನ್ನಂತಹವರನ್ನ ನನ್ನ ಕುಲಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜಾತಿ ನಿಂದನೆ ಮಾಡಿ, ನನಗೆ ಜೀವ ಬೆದರಿಕೆ ಹಾಕಿ,ಮಾನಸಿಕವಾಗಿ ನೋವುಂಟು ಮಾಡಿದ್ದ ಎಂದು ಆರೋಪಿಸಿ, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮಂಜುಳ ಎಂಬುವರು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಅಂದಿನ ತನಿಖಾಧಿಕಾರಿಗಳಾದ ಸುರೇಶ್.ಎಂ. ಡಿ.ವೈ.ಎಸ್.ಪಿ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ.ಓ. ಪುಷ್ಪಾ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಚಿದಾನಂದ ಎಸ್ ಇ, ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ,
ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ.ರವರು ಇಂದು ಆರೋಪಿತನಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 1,05,000/- ರೂ ದಂಡ ಶಿಕ್ಷೆಯನ್ನು ಆದೇಶಿಸಿದ್ದಾರೆ. ಆರೋಪಿತನು ದಂಡವನ್ನು ನೀಡಲು ತಪ್ಪಿದ್ದಲ್ಲಿ 1 ವರ್ಷ 2 ತಿಂಗಳ ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಿರುತ್ತದೆ. ಸಂತ್ರಸ್ತೆಗೆ 1,00,000/- ರೂಗಳನ್ನು ಪರಿಹಾರ ನೀಡುವಂತೆ ಆದೇಶಿಸಿರುತ್ತದೆ.



