ಶಿವಮೊಗ್ಗ, ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಮೊದಲು ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ ಎಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ವಿಧೇಯಕವನ್ನು ಮಂಡಿಸಿದೆ.
ಪ್ರೀತಿನ ಗೆಲ್ಲಲು ಕಾರಣ ಬೇಕಿಲ್ಲ ಆದರೆ ದ್ವೇಷ ಮಾಡೋಕೆ ಬಹಳಷ್ಟು ಕಾರಣ ಬೇಕಾಗುತ್ತವೆ. ಆದರೆ ದ್ವೇಷವು ಸಮಾಜವನ್ನು ಹಾಳುಗೆಡವುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ತಂದಿರುವ ಈ ಕಾನೂನನ್ನು ಬಿಜೆಪಿ ನಾಯಕರು ವಿರೋಧಿಸುತ್ತಿರುವುದು ಖಂಡನೀಯ ಎಂದರು.
ಶಾಸಕ ಚೆನ್ನಬಸಪ್ಪ ಅವರು ಈ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಸಿರುವುದು ಹಾಗೂ ರಾಜ್ಯಪಾಲರಿಗೆ ಸಹಿ ಹಾಕದಂತೆ ಒತ್ತಾಯಿಸಿರುವುದು ಅವರ ದ್ವೇಷದ ಮನಸ್ಥಿತಿಯನ್ನು ತೋರಿಸುತ್ತದೆ.
ಹಿಂದೆ ಸಿದ್ದರಾಮಯ್ಯನವರ ತಲೆ ಕಡಿಯುವ ಮಾತನಾಡಿದ್ದ ಚೆನ್ನಬಸಪ್ಪ ಹಾಗೂ ದಶಕಗಳ ಕಾಲ ಅಧಿಕಾರದಲ್ಲಿದ್ದೂ ಅಭಿವೃದ್ಧಿ ಮಾಡದ ಕೆ.ಎಸ್. ಈಶ್ವರಪ್ಪ ಅವರು ಕೇವಲ ದ್ವೇಷವನ್ನೇ ಬಿತ್ತುತ್ತಾ ಬಂದಿದ್ದಾರೆ. ಅವರು ಜಿಲ್ಲೆಯಲ್ಲಿ ಯಾವದೇ ಅಭಿವೃದ್ದಿಯನ್ನು ಮಾಡಲಿಲ್ಲ. ಅಬಿವೃದ್ದಿ ಮಾಡಿದ್ದರೆ ಅದರ ಕೈಪಿಡಿಯನ್ನು ಬಿಡುಗಡೆ ಮಾಡಲಿ ಎಂದರು.
ಈ ಕಾನೂನು ಕೇವಲ ಒಂದು ಪಕ್ಷ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ, ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ಆದರೆ ಬಿಜೆಪಿ ನಾಯಕರು ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಹಿಂದೂಸ್ತಾನ, ಪಾಕಿಸ್ತಾನ ಮತ್ತು ಮುಸ್ಲಿಂ ಎನ್ನುತ್ತಾ ಕಾಲ ಕಳೆಯುತ್ತಿದ್ದಾರೆ.
ಸೀಗೇಹಟ್ಟಿ ದೇವಸ್ಥಾನದ ಪ್ರಕರಣ ಸೇರಿದಂತೆ ಹಲವು ಕಡೆ ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದು ಯೋಗೀಶ್ ಟೀಕಿಸಿದರು.
ಇನ್ನು ಮುಂದಾದರೂ ಬಿಜೆಪಿ ನಾಯಕರು ಇಂತಹ ಪ್ರವೃತ್ತಿ ಬಿಟ್ಟು ಜನಪರ ಕೆಲಸಗಳ ಬಗ್ಗೆ ಮಾತನಾಡಲಿ ಎಂದು ಅವರು ಆಗ್ರಹಿಸಿದರು.



