ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತುಕತೆ ಯಶಸ್ವಿ ; ಹಾರ್ಮುಜ್ ಜಲಸಂಧಿ ಡಾಟಲು ಇರಾನ್ ಸಮ್ಮತಿ

ವಿದೇಶ

ನವದೆಹಲಿ, ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಬಹುತೇಕ ಬಂದ್ ಮಾಡಿರುವ ನಡುವೆಯೇ, ಭಾರತಕ್ಕೆ ಭಾರಿ ನೆಮ್ಮದಿಯ ಸುದ್ದಿಯೊಂದು ಲಭಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇರಾನ್ ಸಚಿವರೊಂದಿಗೆ ನಡೆಸಿದ ಯಶಸ್ವಿ ಮಾತುಕತೆಯ ನಂತರ, ಭಾರತೀಯ ಧ್ವಜ ಹೊಂದಿರುವ ತೈಲ ಟ್ಯಾಂಕರ್‌ಗಳಿಗೆ ಮುಕ್ತವಾಗಿ ಸಂಚರಿಸಲು ಇರಾನ್ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಸರಣಿ ಮಾತುಕತೆ ನಡೆಸಿದ್ದರು. ಇದರ ಫಲವಾಗಿ ‘ಪುಷ್ಪಕ್’ ಮತ್ತು ‘ಪರಿಮಳ್’ ಎಂಬ ಹೆಸರಿನ ಎರಡು ಭಾರತೀಯ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಈಗಾಗಲೇ ಸುರಕ್ಷಿತವಾಗಿ ಸಾಗಿವೆ.​

ಭಾರತಕ್ಕೆ ವಿಶೇಷ ವಿನಾಯಿತಿ: ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ರಾಷ್ಟ್ರಗಳ ಹಡಗುಗಳ ಮೇಲೆ ಇರಾನ್ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರೂ, ಭಾರತದ ಇಂಧನ ಭದ್ರತೆಯನ್ನು ಪರಿಗಣಿಸಿ ಈ ವಿಶೇಷ ವಿನಾಯಿತಿ ನೀಡಲಾಗಿದೆ.​

ಮುಂಬೈ ತಲುಪಿದ ಹಡಗು: ಇಸ್ರೇಲ್-ಇರಾನ್ ಯುದ್ಧ ಆರಂಭವಾದ ನಂತರ, ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬೈ ಬಂದರು ತಲುಪಿದ ಮೊದಲ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ‘ಶೆನ್‌ಲಾಂಗ್ ಸೂಯೆಜ್‌ಮ್ಯಾಕ್ಸ್’ ಪಾತ್ರವಾಗಿದೆ.

ಭಾರತಕ್ಕೆ ಬೇಕಾದ ಕಚ್ಚಾ ತೈಲ ಮತ್ತು ಅಡುಗೆ ಅನಿಲದ (LPG) ಸುಮಾರು ಅರ್ಧದಷ್ಟು ಪಾಲು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುವ ಮತ್ತು ಇಂಧನ ಅಭಾವ ಸೃಷ್ಟಿಯಾಗುವ ಭೀತಿಯಿತ್ತು.

Author