ಮಂಡ್ಯ | ನೇಣಿಗೆ ಶರಣಾದ ದಂಪತಿ, ಪ್ರಾಣಾಪಾಯದಿಂದ ಪಾರಾದ ಮಗು

ಮಂಡ್ಯ

ಮಂಡ್ಯ, ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಸೋಮವಾರ ನಡೆದಿದೆ.

ಈ ಘಟನೆಯಲ್ಲಿ ಎರಡು ವರ್ಷದ ಹೆಣ್ಣು ಮಗು ಅದೃಷ್ಟವಶಾತ್ ಬದುಕುಳಿದಿದೆ.ಆತ್ಮಹತ್ಯೆ ಮಾಡಿಕೊಂಡವರು ಕೆ.ಆರ್.ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ದರ್ಶನ್ (29) ಹಾಗೂ ಅವರ ಪತ್ನಿ ದಿವ್ಯಶ್ರೀ (25) ಎಂದು ಗುರುತಿಸಲಾಗಿದೆ.

ಇವರು ಜಯನಗರದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ದರ್ಶನ್ ಕೃಷಿಯ ಜೊತೆಗೆ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ದಿವ್ಯಶ್ರೀ ಪ್ಯಾರಾಮೆಡಿಕಲ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ದಂಪತಿ ತಮ್ಮ ಎರಡು ವರ್ಷದ ಹೆಣ್ಣು ಮಗುವಿನ ಜೀವಕ್ಕೂ ಹಾನಿ ಮಾಡಲು ಯತ್ನಿಸಿದರೆಂಬ ಶಂಕೆ ವ್ಯಕ್ತವಾಗಿದ್ದು, ಮಗು ಅದೃಷ್ಟವಶಾತ್ ಬದುಕುಳಿದಿದೆ ಎಂದು ಮಾಹಿತಿ ಲಭ್ಯವಾಗಿದೆ.

ದಿವ್ಯಶ್ರೀ ಅವರು ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದವರಾಗಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಹೊಸಕೋಟೆಯ ದರ್ಶನ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಈ ಸಂಬಂಧ ದರ್ಶನ್ ಅವರ ತಂದೆ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Author