ಶಿವಮೊಗ್ಗ,ಯಾವುದೇ ನಿರ್ಧಿಷ್ಟ ಗುರಿಗಳಿಲ್ಲದ,ದೇಶದ ಜನರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕೇವಲ ಔಪಚಾರಿಕ ಬಜೆಟ್ 2026 ಕೇಂದ್ರ ಬಜೆಟ್ 2026 ಎಂದು ಕರ್ನಾಟಕ ರಾಜ್ಯ ಜವಳಿ ಮತ್ತು ಕೈಮಗ್ಗ (ವಿದ್ಯುತ್) ನಿಗಮ ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಕೆ. ಚೇತನ್ ಗೌಡ ತಿಳಿಸಿದ್ದಾರೆ.
ಕರ್ನಾಟಕದ ಹಿತಾಸಕ್ತಿ ಹಾಗೂ ಮಲೆನಾಡಿನ ರೈಲ್ವೆ-ನೀರಾವರಿ ಯೋಜನೆಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಮಂಡಿಸಿರುವ 2026ರ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ದಶಕಗಳ ಅನ್ಯಾಯವನ್ನು ಮುಂದುವರಿಸಿದಂತಿದೆ. ದೇಶದ ಆರ್ಥಿಕತೆಗೆ ಅತಿ ಹೆಚ್ಚು ಜಿಎಸ್ಟಿ ಮತ್ತು ಆದಾಯ ತೆರಿಗೆಯನ್ನು ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ, ಕೇಂದ್ರದಿಂದ ಮರಳಿ ಸಿಗುತ್ತಿರುವ ಪಾಲು ಮಾತ್ರ ಅತ್ಯಂತ ನಗಣ್ಯವಾಗಿದೆ.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಈ ಹಿಂದೆ ಇದ್ದ ಶೇ. 4.71ರಷ್ಟು ಪಾಲನ್ನು ಶೇ. 3.64ಕ್ಕೆ ಇಳಿಸಿರುವುದು ರಾಜ್ಯದ ಅಭಿವೃದ್ಧಿಗೆ ದೊಡ್ಡ ಹೊಡೆತ ನೀಡಿದೆ. ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿಗೆ ಕೇವಲ 13 ರಿಂದ 15 ಪೈಸೆ ಮಾತ್ರ ಮರಳಿ ಪಡೆಯುತ್ತಿರುವುದು ಒಕ್ಕೂಟ ವ್ಯವಸ್ಥೆಯ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ.
ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಸಾಧಿಸಿದ ಯಶಸ್ಸನ್ನೇ ಮಾನದಂಡವಾಗಿ ಬಳಸಿ ಅನುದಾನ ಕಡಿತಗೊಳಿಸಿರುವುದು ರಾಜ್ಯದ ಪ್ರಗತಿಗೆ ಮುಳುವಾಗಿದೆ.ಇನ್ನು ಮಲೆನಾಡು ಭಾಗದ ದೃಷ್ಟಿಕೋನದಿಂದ ನೋಡಿದರೆ, ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳ ಜೀವನಾಡಿಯಾದ ಅಡಿಕೆ ಮತ್ತು ಕಾಫಿ ಬೆಳೆಗಾರರ ನಿರೀಕ್ಷೆಗಳು ಸಂಪೂರ್ಣವಾಗಿ ಹುಸಿಯಾಗಿವೆ.
ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗೆ ಬಾಧಿಸಿರುವ ಮಾರಕ ಎಲೆ ಚುಕ್ಕೆ ರೋಗದ ಸಂಶೋಧನೆಗೆ ಅಥವಾ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ.
ಜಿಲ್ಲೆಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ರೈಲ್ವೆ ಯೋಜನೆಗಳಾದ ಶಿವಮೊಗ್ಗ-ಹರಿಹರ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಗಳಿಗೆ ಈ ಬಾರಿಯೂ ನಿರೀಕ್ಷಿತ ವೇಗದಲ್ಲಿ ಅನುದಾನ ಸಿಗದಿರುವುದು ದಶಕಗಳ ಕಾಲದ ಬೇಡಿಕೆಗಳನ್ನು ಗಾಳಿಗೆ ತೂರಿದಂತಾಗಿದೆ.
ದಕ್ಷಿಣ ಕನ್ನಡ ಅಥವಾ ಕರಾವಳಿ ಭಾಗಕ್ಕೆ ಮಲೆನಾಡಿನಿಂದ ನೇರ ರೈಲು ಸಂಪರ್ಕ ಕಲ್ಪಿಸುವ ಘಾಟಿ ಪ್ರದೇಶದ ಯೋಜನೆಗಳ ಬಗ್ಗೆಯೂ ಬಜೆಟ್ ಮೌನವಹಿಸಿದೆ.ನೀರಾವರಿ ಕ್ಷೇತ್ರದಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದ್ದು, ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ 2023ರಲ್ಲಿ ಘೋಷಿಸಲಾಗಿದ್ದ 5,300 ಕೋಟಿ ರೂಪಾಯಿಗಳ ಅನುದಾನ ಇಂದಿಗೂ ಪೂರ್ಣ ಪ್ರಮಾಣದಲ್ಲಿ ತಲುಪದೆ ವಿಳಂಬವಾಗುತ್ತಿದೆ.
ಇದು ಮಲೆನಾಡು ಮತ್ತು ಬಯಲುಸೀಮೆಯ ನೀರಾವರಿ ಹಿತಾಸಕ್ತಿಗೆ ಮಾರಕವಾಗಿದೆ. ಒಟ್ಟಾರೆಯಾಗಿ, ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಳಿದ ಎನ್ಡಿಆರ್ಎಫ್ ಅನುದಾನದಿಂದ ಹಿಡಿದು, ಬೆಂಗಳೂರು ಸಬರ್ಬನ್ ರೈಲ್ವೆ ಮತ್ತು ಮಲೆನಾಡಿನ ಪ್ರಮುಖ ಯೋಜನೆಗಳವರೆಗೆ ಕೇಂದ್ರವು ನಿರ್ಲಕ್ಷ್ಯದ ಧೋರಣೆಯನ್ನು ತಳೆದಿದೆ.
ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ಕರ್ನಾಟಕದ ಹಕ್ಕುಗಳನ್ನು ಪಡೆಯಲು ದಶಕಗಳಿಂದ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯವಾಗಿದೆ ಎಂದು ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.



