ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಮತ್ತು ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆ ಉಲ್ಲಂಘಿಸಿದ ಎನ್ಈಪಿ-2020 ಎಂದು ಸುಖದೇವ್ ಥೋರಟ್ ಹೇಳಿದರು. ಎನ್.ಈ.ಪಿ. 2020 ಕ್ಕೆ ಪರ್ಯಾಯವಾಗಿ ಜನಪರ ಶಿಕ್ಷಣ ನೀತಿ ರೂಪಿಸಬೇಕು, ಇಂದು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ನಡೆದ ‘ಜನ ಸಂಸತ್ತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಯುಜಿಸಿ ಮಾಜಿ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್ ಅವರು ಮಾತನಾಡಿದರು.
“ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಎನ್.ಈ.ಪಿ-2020 ನೀತಿಯನ್ನು ಅಪ್ರಜಾತಾಂತ್ರಿಕವಾಗಿ ಜಾರಿಗೊಳಿಸಿದೆ. ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರೀಕರಣ ಮಾಡಲು ಹೊರಟಿದೆ. ಭಾರತೀಯ ಜ್ಞಾನ ವ್ಯವಸ್ಥೆಯ (Indian Knowledge System)ಹೆಸರಿನಲ್ಲಿ ತರ್ಕಹೀನ ಅವೈಜ್ಞಾನಿಕ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. 1990ರ ನಂತರದ ಖಾಸಗೀಕರಣದ ಅಲೆಯಿಂದ ಶೈಕ್ಷಣಿಕ ಅಸಮಾನತೆ ಹೆಚ್ಚುತ್ತಿದೆ. ಸುಮಾರು 67% ಸಂಸ್ಥೆಗಳು ಸ್ವಯಂ-ಹಣಕಾಸು ಮತ್ತು ಖಾಸಗಿ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಹೆಚ್ಚುತ್ತಿರುವ ಶೈಕ್ಷಣಿಕ ಶುಲ್ಕ ದಿಂದಾಗಿ, ಆರ್ಥಿಕವಾಗಿ ಹಿಂದುಳಿದಿರುವ ಜನರಲ್ಲಿ 22% ಡ್ರಾಪ್ಔಟ್ (ಶಾಲಾ ಶಿಕ್ಷಣ ಮೊಟಕುಗೊಳಿಸುವಿಕೆ) ಪ್ರಮಾಣ ಕಂಡುಬಂದಿದೆ. ಈ ಮೂಲಕ ಶಿಕ್ಷಣದ ಸಾರ್ವತ್ರೀಕರಣ ಎಂಬುದು ಕೂಡ ಮರೀಚಿಕೆ ಆಗಿದೆ “ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣವನ್ನು ಒಂದು ಸರಕನ್ನಾಗಿ ನೋಡುವ ಬದಲು ಅದನ್ನು ಸಾರ್ವಜನಿಕ ಸೇವೆ ಎಂದು ಪರಿಗಣಿಸುವ, ವೈಜ್ಞಾನಿಕ- -ಧರ್ಮನಿರಪೇಕ್ಷಿತ-ಪ್ರಜಾತಾಂತ್ರಿಕ- ಸಾರ್ವತ್ರಿಕ “ಜನಪರ ಶಿಕ್ಷಣ ನೀತಿ” ಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಮಾಹಿತಿ ಮತ್ತು ಪ್ರಸಾರ ಭಾರತಿ ಸಚಿವಾಲಯದ ಮಾಜಿ ಕಾರ್ಯದರ್ಶಿಗಳಾದ, ಮಾಜಿ ಸಂಸದ ಶ್ರೀ ಜವಾಹರ್ ಸರ್ಕಾರ್ ಮಾತನಾಡಿ, ಸರ್ಕಾರಿ ಆಡಳಿತಗಳಲ್ಲಿನ ತಮ್ಮ ಸುದೀರ್ಘ ಅನುಭವವನ್ನು ಉಲ್ಲೇಖಿಸುತ್ತಾ ಒಂದು ಗಂಭೀರ ಎಚ್ಚರಿಕೆಯನ್ನು ನೀಡಿದರು. ಪ್ರಸ್ತುತ ನಡೆಯುತ್ತಿರುವ ಈ ಚಳವಳಿಯು ಅತ್ಯಂತ ಬಲಿಷ್ಠ ಮತ್ತು ವ್ಯವಸ್ಥಿತ ಶಕ್ತಿಯ ವಿರುದ್ಧ ಹೋರಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಅವರು ಶಿಕ್ಷಣದಲ್ಲಿ ಕೇಂದ್ರೀಕರಣ, ಕಾರ್ಪೊರೇಟೀಕರಣ, ಕೋಮುವಾದ ಮತ್ತು ಖಾಸಗೀಕರಣ ಎಂಬ ನಾಲ್ಕು ಪ್ರಮುಖ ಉದ್ದೇಶಗಳನ್ನು ಜಾರಿಗೆ ತರಲು ವಿನ್ಯಾಸಗೊಳಿಸಲಾದ ಒಂದು ಅಧಿಕಾರಶಾಹಿ ಸಾಧನ ಎಂದು ತಿಳಿಸಿದರು.
ಕೇವಲ ಮನವಿ ಪತ್ರಕ್ಕೆ ಸ್ಪಂದಿಸುವ ಸರ್ಕಾರ ಇದಲ್ಲ, ಹಾಗಾಗಿ ಸಂಸತ್ತು, ನ್ಯಾಯಾಂಗ ಇನ್ನಿತರ ಎಲ್ಲ ವೇದಿಕೆಗಳ ಮೂಲಕ ಎನ್ಈಪಿ 2020ನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು. ಐಐಟಿ ಮುಂಬೈನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ರಾಮ್ ಪುನಿಯಾನಿ ಅವರು ಪ್ರಸ್ತುತ ಶೈಕ್ಷಣಿಕ ಬಿಕ್ಕಟ್ಟನ್ನು ವಿಶ್ಲೇಷಿಸುತ್ತಾ, ಈಗಿನ ಸರ್ಕಾರವು 11 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಅದು ಸಾಮಾಜಿಕ ಅಸಮಾನತೆಯನ್ನು ಆಳಗೊಳಿಸಲು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಹವಣಿಸುತ್ತಿರುವ ಶತಮಾನದಷ್ಟು ಹಳೆಯದಾದ ರಾಜಕೀಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುಣಮಟ್ಟದ ಶಿಕ್ಷಣವನ್ನು ಉಳ್ಳವರಿಗಾಗಿ ಮೀಸಲಿಡುತ್ತಾ, ಸಾರ್ವಜನಿಕ ಶಾಲೆಗಳನ್ನು ಮುಚ್ಚುತ್ತಿದೆ ಮತ್ತು ಸಾವಿರಾರು ಶಿಕ್ಷಕರ ಹುದ್ದೆಗಳನ್ನು ಖಾಲಿ ಉಳಿಸುತ್ತಿದೆ ಎಂದು ಅವರು ದೂರಿದರು.
ವೈಜ್ಞಾನಿಕ ಮನೋಭಾವ ಮತ್ತು ತರ್ಕಬದ್ಧ ಚಿಂತನೆಯ ಮೇಲಿನ ವ್ಯವಸ್ಥಿತ ದಾಳಿಯನ್ನು ಅವರು ಕಟುವಾಗಿ ಟೀಕಿಸಿದರು. ಪಠ್ಯಪುಸ್ತಕಗಳಿಂದ ಆವರ್ತಕ ಕೋಷ್ಟಕ (Periodic table) ಮತ್ತು ವಿಕಾಸವಾದದ ಸಿದ್ಧಾಂತವನ್ನು (Evolution theory) ತೆಗೆದುಹಾಕುವ ಮೂಲಕ ಸ್ಥಾಪಿತ ವೈಜ್ಞಾನಿಕ ಅಡಿಪಾಯಗಳನ್ನು ಕುಗ್ಗಿಸಿ, ಅದರ ಬದಲಿಗೆ ಅವೈಜ್ಞಾನಿಕ “ಗುರುಕುಲ ಮಾದರಿ”ಯನ್ನು ಹೇರುತ್ತಿರುವ ಆತಂಕಕಾರಿ ಬದಲಾವಣೆಗಳನ್ನು ಅವರು ಎತ್ತಿ ತೋರಿಸಿದರು.
ಎಲ್ಲಾ ಐತಿಹಾಸಿಕ ಪ್ರಗತಿಯು ತರ್ಕಬದ್ಧ ಚಿಂತನೆಯ ಅಡಿಪಾಯದ ಮೇಲೆ ನಿರ್ಮಿತವಾಗಿದೆ; ನಾವು ಅದನ್ನು ಕಾಪಾಡಬೇಕಿದೆ. ಆಳ್ವಿಕರ ದಾಳಿಯಿಂದಾಗಿ ದೇಶವು ಅಂಧಕಾರದ ಯುಗಕ್ಕೆ ಜಾರದಂತೆ ತಡೆಯಲು ಹೋರಾಡುವುದು ಅತ್ಯಗತ್ಯ” ಎಂದು ಎಚ್ಚರಿಸಿದರು.
ಎಐಎಸ್ಇಸಿ ರೂಪಿಸಿದ ಜನಪರ ಶಿಕ್ಷಣ ನೀತಿ ಮತ್ತು ಈ ಜನ ಸಂಸತ್ತು ಕಾರ್ಯಕ್ರಮದ ಹಿನ್ನೆಲೆಯ ಕುರಿತು ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ತರುಣ್ ಕಾಂತಿ ನಸ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. “ಎನ್ಇಪಿ 2020ರಲ್ಲಿರುವ ಶಿಕ್ಷಣ ವಿರೋಧಿ ಅಂಶಗಳು ವಿರುದ್ಧ ದನಿ ಎತ್ತಿದಾಗ ನಾವೇ ಏಕೆ ಒಂದು ಪರ್ಯಾಯ ಮಾದರಿ ಜನಪರ ಶಿಕ್ಷಣ ನೀತಿಯನ್ನು ರೂಪಿಸಿ ಬಾರದು ಎಂಬ ಪ್ರಶ್ನೆ ಬಂತು. ಅದರಂತೆ ದೇಶದ ಹಲವಾರು ಶಿಕ್ಷಣ ತಜ್ಞರ ಸಹಕಾರದಿಂದ ಒಂದು ಕರಡು ಶಿಕ್ಷಣ ನೀತಿಯನ್ನು ರಚಿಸಿ ಮೇ 2025ರಿಂದ ಸಾರ್ವಜನಿಕ ಚರ್ಚೆಗೆ ಬಿಡಲಾಗಿದೆ. ದೇಶದ ಬಹುತೇಕ ಭಾಷೆಗಳಲ್ಲಿ ಲಕ್ಷಾಂತರ ಪ್ರತಿಗಳನ್ನು ಮುದ್ರಿಸಿ ವಿತರಿಸಲಾಯಿತು.
ಈ ಕರಡು ನೀತಿಗೆ ಸಾವಿರಾರು ಸಲಹೆಗಳು ಬಂದಿವೆ. ಅವುಗಳ ಕುರಿತು ಈ ಜನ ಸಂಸತ್ತಿನಲ್ಲಿ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು. ಕೊನೆಯಲ್ಲಿ ಈ ನೀತಿಯ ಜಾರಿಗಾಗಿ’ಬೆಂಗಳೂರು ಘೋಷಣೆ’ (Bangalore Declaration ) ಮಂಡಿಸಲಾಗುವುದು” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎನ್. ಶಾ ಅವರು ವಹಿಸಿದ್ದರು.
ಈ ಜನ ಸಂತ್ತಿನ ಸ್ವಾಗತ ಸಮಿತಿ ಅಧ್ಯಕ್ಷರಾದ ಪ್ರೊ ಮುರಿಗೆಪ್ಪ ಅವರು ಅತಿಥಿಗಳನ್ನು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ, ಪ್ರೊ. ಅರುಣಕುಮಾರ್, ಪ್ರೊ. ಆದಿತ್ಯ ಮುಖರ್ಜಿ, ಡಾ. ನಿರಂಜನಾರಾಧ್ಯ ವಿ. ಪಿ, ಪ್ರೊ. ಎ. ಹೆಚ್. ರಾಜಾಸಾಬ್, ಡಾ. ಫ್ರಾನ್ಸಿಸ್ ಅಸ್ಸಿಸಿ, ಅಲ್ಮೇಡಾ, ಪ್ರೊ. ಜವಾಹರ್ ನೇಸನ್, ಡಾ. ಮಹಾಬಲೇಶ್ವರ ರಾವ್, ಡಾ. ಎ. ಆರ್. ವಾಸವಿ, ಡಾ. ಶಿಂಟಿ ಅಂಟೋನಿ, ಪ್ರೊ. ಅಲ್ಲಮಪ್ರಭು ಬೆಟ್ಟದೂರ್ ಹಾಗೂ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 1000 ಪ್ರತಿನಿಧಿಗಳು ಭಾಗವಹಿಸಿದ್ದರು.
ಉದ್ಘಾಟನಾ ಅಧಿವೇಶನದ ನಂತರ ಶಿಕ್ಷಣ ನೀತಿಯ ಹಲವಾರು ಅಂಶಗಳ ಬಗ್ಗೆ ಪ್ರತ್ಯೇಕ ಚರ್ಚೆಗಳು ನಡೆಯಲಿವೆ. ಕೊನೆಗೆ ಸಮಾರೋಪ ಅಧಿವೇಶನದಲ್ಲಿ ಜನಪರ ಶಿಕ್ಷಣ ನೀತಿಯ ಅಂತಿಮ ಪ್ರತಿಗೆ ಅಂಗೀಕಾರ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.



