ಚಾಮರಾಜನಗರ | ಹುಲಿಗಳ ಓಡಾಟ ಕಂಡು ಜನ ಕಂಗಾಲು

ಚಾಮರಾಜನಗರ

ಚಾಮರಾಜನಗರ, ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟದಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇದೀಗ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳ ಗ್ರಾಮಸ್ಥರಲ್ಲಿ ತೀವ್ರ ವ್ಯಾಘ್ರಾತಂಕ ಮನೆ ಮಾಡಿದೆ.

ಒಂದಲ್ಲ, ಎರಡಲ್ಲ.. 5 ಹುಲಿಗಳು ಹಾದುಹೋದ ದೃಶ್ಯ ನಂಜದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಜಮೀನಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಾಮರಾಜನಗರ ತಾಲೂಕಿನ ನಂಜದೇವಪುರದ ಜಮೀನಿನ‌ ಪಕ್ಕವೇ ಆನೆಮಡುವಿನ ಕೆರೆಯಿದ್ದು, ಅಲ್ಲಿಂದ 5 ಹುಲಿಗಳು ತೆರಳುವಾಗ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್​ ಆಗಿದೆ. ಕೆರೆ ಬಳಿ ಹುಲಿಗಳು ಪ್ರತ್ಯಕ್ಷವಾಗಿದ್ದನ್ನು ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಈ ಹಿಂದೆ ಇದೇ ನಂಜದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್​​ಟಿ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ತೀವ್ರ ಕೂಂಬಿಂಗ್ ನಡೆಸಿದ್ದರಾದರೂ ಸೆರೆಯಾಗಿರಲಿಲ್ಲ. ಈಗ ಮತ್ತೆ ಹುಲಿಗಳು ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು‌‌‌‌‌ ಸ್ಥಳಕ್ಕೆ‌‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಡಗೂರಿನಲ್ಲಿ ಹಸು ತಿನ್ನುವ ದೃಶ್ಯ ಸೆರೆ:

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮೂಡುಗೂರು ಗ್ರಾಮದಲ್ಲಿ ಹಾಡಹಗಲೇ ಹುಲಿಯೊಂದು ದಾಳಿ ನಡೆಸಿ, ಎರಡು ಹಸುಗಳನ್ನು ಬಲಿ ಪಡೆದ ಘಟನೆ ಗುರುವಾರ ನಡೆದಿತ್ತು.‌

ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾ ಟ್ರಾಪ್​ನಲ್ಲಿ ಬೇಟೆಯಾಡಿದ್ದ ಹಸುವನ್ನು ಮತ್ತೆ ತಿನ್ನಲು ಬಂದ ಹುಲಿರಾಯನ ದೃಶ್ಯ ಸೆರೆಯಾಗಿದೆ

Author